
ಚೆನ್ನೈ: ತಮಿಳುನಾಡಿನ ಪೌರಾಡಳಿತ ಮತ್ತು ನೀರು ಪೂರೈಕೆ ಇಲಾಖೆಯ (ಎಂಎಡಬ್ಲ್ಯೂಎಸ್) ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದ್ದು, ಪ್ರತಿ ಹುದ್ದೆಗೆ ₹25 ಲಕ್ಷದಿಂದ ₹35 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಇ.ಡಿ ಆರೋಪವು ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ‘ಎಂಎಡಬ್ಲ್ಯೂಎಸ್’ನಲ್ಲಿ ಕನಿಷ್ಠ 150ರಿಂದ 2,538 ಹುದ್ದೆಗಳ ನೇಮಕಾತಿ ‘ಉದ್ಯೋಗಕ್ಕಾಗಿ ಲಂಚ’ ಹಗರಣದಡಿ ಸೇರಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತಮಿಳುನಾಡು ಪೊಲೀಸರಿಗೆ ಇ.ಡಿ ದಾಖಲೆಗಳನ್ನು ಹಸ್ತಾಂತರಿಸಿದೆ.
ತಮಿಳುನಾಡಿನ ಪೌರಾಡಳಿತ ಮತ್ತು ನೀರು ಪೂರೈಕೆ ಇಲಾಖೆ ಸಚಿವ ಕೆ.ಎನ್. ನೆಹರು ಇ.ಡಿ ಆರೋಪವನ್ನು ಅಲ್ಲಗಳೆದಿದ್ದಾರೆ. ಲಿಖಿತ ಪರೀಕ್ಷೆ ಸೇರಿದಂತೆ ಕಾನೂನುಬದ್ಧವಾಗಿಯೇ ನೇಮಕಾತಿ ನಡೆದಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ಡಿಎಂಕೆ ಸರ್ಕಾರಕ್ಕೆ ಮಸಿ ಬಳಿಯುವ ಉದ್ದೇಶದಿಂದಲೇ ತಮಿಳುನಾಡು ಡಿಜಿಪಿಗೆ ಇ.ಡಿ ದಾಖಲೆ ಹಸ್ತಾಂತರಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಸಚಿವ ನೆಹರು ಅವರಿಗೆ ಸೇರಿದ ಕಟ್ಟಡದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ಲಂಚ ಹಗರಣದ ದಾಖಲೆಗಳು ಲಭಿಸಿವೆ. ಈ ಹಗರಣದ ಬೇರುಗಳು ಆಳವಾಗಿ ಇಳಿದಿವೆ. ಇದೊಂದು ವ್ಯವಸ್ಥಿತ ಭ್ರಷ್ಟಾಚಾರದ ಜಾಲ’ ಎಂದು ಇ.ಡಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.