ADVERTISEMENT

ದೆಹಲಿ CM ಅರವಿಂದ ಕೇಜ್ರಿವಾಲ್‌ಗೆ 5ನೇ ಸಮನ್ಸ್ ಜಾರಿ ಮಾಡಿದ ED

ಏಜೆನ್ಸೀಸ್
Published 31 ಜನವರಿ 2024, 10:27 IST
Last Updated 31 ಜನವರಿ 2024, 10:27 IST
   

ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ED)ವು ಮತ್ತೊಂದು ಸಮನ್ಸ್ ಜಾರಿ ಮಾಡಿದ್ದು, ಫೆ. 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಕೇಜ್ರಿವಾಲ್‌ಗೆ ಸಲ್ಲಿಕೆಯಾಗುತ್ತಿರುವ 5ನೇ ಸಮನ್ಸ್ ಇದಾಗಿದೆ. ಜ. 18ರಂದು ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಅದಕ್ಕೆ ಅವರು ಗೈರಾಗಿದ್ದರು. ಇದಕ್ಕೂ ಮೊದಲು ಜನವರಿ 3, ಡಿಸೆಂಬರ್‌ 22 ಮತ್ತು ನವೆಂಬರ್ 2ರಂದು ಅವರಿಗೆ ಸಮನ್ಸ್ ಜಾರಿಯಾಗಿತ್ತು.

ಅಬಕಾರಿ ನೀತಿಯ ನಿರೂಪಣೆಯಲ್ಲಿ ಅವರ ಪಾತ್ರ ಕುರಿತು ಹೇಳಿಕೆ ದಾಖಲಿಸುವಂತೆ ಕೇಜ್ರಿವಾಲ್‌ಗೆ ED ಸೂಚಿಸಿದೆ. ಆದರೆ ಸಮನ್ಸ್ ಕಳುಹಿಸುತ್ತಿರುವುದೇ ಅಕ್ರಮ ಎಂದಿರುವ ಕೇಜ್ರಿವಾಲ್‌, ‘ಜಾರಿ ನಿರ್ದೇಶನಾಲಯದ ಉದ್ದೇಶ ಸರಿಯಾಗಿದ್ದರೆ ನಾನು ವಿಚಾರಣೆ ಎದುರಿಸಲು ಸಿದ್ಧ. ಆದರೆ ತನ್ನನ್ನು ಬಂಧಿಸುವ ಮೂಲಕ ಲೋಕಸಭಾ ಚುನಾವಣೆಯಿಂದ ದೂರ ಇಡುವ ಉದ್ದೇಶ ಹೊಂದಿದೆ’ ಎಂದಿದ್ದಾರೆ.

ADVERTISEMENT

‘ಕಾನೂನು ದೃಷ್ಟಿಯಲ್ಲಿ ಈ ಎಲ್ಲಾ ನೋಟಿಸ್‌ಗಳೂ ಅಕ್ರಮ ಹಾಗೂ ಅಸಿಂಧು. ಈ ಹಿಂದೆ ED ಕಳುಹಿಸಿರುವ ಇಂಥ ನೋಟಿಸ್‌ಗಳನ್ನು ಅಸಿಂಧುಗೊಳಿಸಿ ನ್ಯಾಯಾಲಯಗಳು ಆದೇಶಿಸಿರುವ ಉದಾಹರಣೆಗಳಿವೆ. ರಾಜಕೀಯ ಪ್ರೇರಣೆಯಿಂದ ಇಂಥ ನೋಟಿಸ್‌ಗಳನ್ನು ನನಗೆ ಕಳುಹಿಸಲಾಗುತ್ತಿದೆ’ ಎಂದು 4ನೇ ನೋಟಿಸ್‌ ಸಲ್ಲಿಕೆಯಾದಾಗ ಕೇಜ್ರಿವಾಲ್ ಹೇಳಿದ್ದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ 2021–22ರಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿಕೊಂಡಿತ್ತು. ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದಂತೆ ನೀತಿಯನ್ನು ಹಿಂಪಡೆಯಲಾಗಿತ್ತು.

2023ರ ಡಿ. 2ರಲ್ಲಿ ಸಲ್ಲಿಸಿದ 6ನೇ ಆರೋಪಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಸಂಜಯ್ ಸಿಂಗ್ ಹಾಗೂ ಅವರ ಆಪ್ತ ಸರ್ವೇಶ್ ಮಿಶ್ರಾ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ED ಪ್ರಕಾರ 2022ರಲ್ಲಿ ಗೋವಾ ಚುನಾವಣಾ ಪ್ರಚಾರಕ್ಕಾಗಿ ಒಟ್ಟು ₹ 45 ಕೋಟಿ ಲಂಚ ಪಡೆಯಲಾಗಿದೆ ಎಂದು ಆರೋಪಿಸಿತ್ತು. 

ಪ್ರಕರಣದ ವಿಚಾರಣೆ ನಡೆಸುವಂತೆ ಹಾಗೂ ನೀತಿಯನ್ನು ರದ್ದುಪಡಿಸುವಂತೆ ದೆಹಲಿ ಲೆಫ್ಟಿನೆಂಟ್ ಜನರಲ್ ವಿನಯ್ ಕುಮಾರ್ ಸೆಕ್ಸೇನಾ ಅವರು ಆದೇಶಿಸಿದ್ದರು. ಈವರೆಗೂ ಎಎಪಿ ಮುಖಂಡರಾದ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ (ಫೆ. 26) ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ (ಅ. 5) ಅವರನ್ನು ಬಂಧಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.