ಇ.ಡಿ
ಅಹಮದಾಬಾದ್: ಸೈಬರ್ ಅಪರಾಧಗಳ ಮೂಲಕ ಜನ ಸಾಮಾನ್ಯರಿಗೆ ₹100 ಕೋಟಿಗೂ ಅಧಿಕ ಮೊತ್ತವನ್ನು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹಾಗೂ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇ.ಡಿ) ಬುಧವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ತನಿಖಾ ಸಂಸ್ಥೆಗಳ ಹೆಸರಿನಲ್ಲಿ ನಡೆದಿರುವ ಡಿಜಿಟಲ್ ಅರೆಸ್ಟ್ ಹಾಗೂ ಕ್ರಿಪ್ಟೋ ವಹಿವಾಟಿನ ಮೂಲಕ ವಂಚಿಸಿ ಪಡೆದಿರುವ ಈ ಹಣವನ್ನು ಹವಾಲಾ ದಂಧೆಯ ಮೂಲಕ ಕ್ರಿಪ್ಟೋ ಕರೆನ್ಸಿಯಾಗಿ ಬದಲಿಸಿ, ವಿದೇಶಗಳಿಗೆ ರವಾನೆ ಮಾಡಿರುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಹಣದ ಅಕ್ರಮ ವರ್ಗಾವಣೆ (ತಡೆ) ಕಾಯ್ದೆ (ಪಿಎಂಎಲ್ಎ) ಅನ್ವಯ ಶೋಧ ನಡೆಸಿರುವುದಾಗಿ ಇ.ಡಿ ಮೂಲಗಳು ತಿಳಿಸಿವೆ.
ಗುಜರಾತ್ನ ಅಹಮದಾಬಾದ್, ಸೂರತ್ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. 2024ರಲ್ಲಿ ಗುಜರಾತ್ ಪೊಲೀಸರು ಮಕ್ಬುಲ್ ಡಾಕ್ಟರ್, ಕಾಶೀಫ್ ಡಾಕ್ಟರ್, ಬಸ್ಸಾಂ ಡಾಕ್ಟರ್, ಮಹೇಶ್ ಮಫಾತಲ ದೇಸಾಯಿ, ಮಾಜ್ ಅಬ್ದುಲ್ ರಹೀಂ ನಾದಾ ಹಾಗೂ ಇತರರ ವಿರುದ್ಧ ದಾಖಲಿಸಿದ್ದ ಸೈಬರ್ ವಂಚನೆ ಪ್ರಕರಣವನ್ನು ಆಧರಿಸಿ, ಪಿಎಂಎಲ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.