ರಾಜಸ್ಥಾನ: ಕೊಳವೆ ಬಾವಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಕಾರ್ಯಾಚರಣೆ
(ಪಿಟಿಐ ಚಿತ್ರ)
ಜೈಪುರ: ರಾಜಸ್ಥಾನದಲ್ಲಿ ಡಿಸೆಂಬರ್ 23ರಂದು ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕಿಯ ರಕ್ಷಣೆಗೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.
ಒಂದು ವಾರ ಕಳೆದರೂ ಹೊರತೆಗೆಯಲು ಸಾಧ್ಯವಾಗದೇ ಇರುವುದು ಬಾಲಕಿ ಚೇತನ ಜೀವಂತವಾಗಿ ಇರಬಹುದೇ ಎಂಬ ಅನುಮಾನ ಮೂಡಿದೆ.
ರಾಜಸ್ಥಾನದ ಕೋಟಪುತಲಿ-ಬಹರೋಡ್ ಜಿಲ್ಲೆಯಲ್ಲಿ ಸುಮಾರು 150 ಅಡಿ ಆಳದ ಕೊಳವೆ ಬಾವಿಗೆ ಬಾಲಕಿ ಆಕಸ್ಮಿಕವಾಗಿ ಬಿದ್ದಿದ್ದಳು.
'ತಜ್ಞರ ಮಾರ್ಗದರ್ಶನ ಪಡೆದು ಎನ್ಡಿಆರ್ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಐವರು ತಜ್ಞರಿಂದ ನಮ್ಮ ಕಾರ್ಯಾಚರಣೆ ವಿಧಾನ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿದ್ದೇವೆ' ಎಂದು ಎನ್ಡಿಆರ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಕೋಟಪುತಲಿ-ಬಹರೋಡ್ ಜಿಲ್ಲಾಧಿಕಾರಿ ಕಲ್ಪನಾ ಅಗರವಾಲ್ ಸಹ ಪ್ರತಿಕ್ರಿಯಿಸಿದ್ದು, 'ಎನ್ಡಿಆರ್ಎಫ್ನ ರಕ್ಷಣಾ ಕಾರ್ಯಾಚರಣೆ ಸರಿಯಾದ ದಿಕ್ಕಿನಲ್ಲಿದೆ ಎಂಬುದನ್ನು ಪರಿಶೀಲಿಸಲು ಮೂರು ವಿಭಿನ್ನ ತಂಡಗಳನ್ನು ಕರೆದಿದ್ದೇವೆ. ಗಣಿಗಾರಿಕೆ ತಜ್ಞರೂ ಸ್ಥಳದಲ್ಲಿದ್ದಾರೆ. ತಜ್ಞರ ನಿರ್ದೇಶನದಂತೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.
'ಕೊಳವೆ ಬಾವಿಗೆ ಸಮಾನಂತರವಾಗಿ ಅಗೆಯುವ ಕಾರ್ಯ ಮುಂದುವರಿದಿದೆ. ಈ ನಡುವೆ ಸುರಿದ ಮಳೆಯು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿತು. ಬಂಡೆಯನ್ನು ಒಡೆಯುವುದು ಸವಾಲಾಗಿದೆ. ಇದು ರಾಜ್ಯದಲ್ಲಿ ಎದುರಾದ ಅತ್ಯಂತ ಕಠಿಣ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.