ಬೆಂಗಳೂರು: ಮಹಾರಾಷ್ಟ್ರದ ಎಂವಿಎ ಸರ್ಕಾರದ ವಿರುದ್ಧ ಬಂಡಾಯ ಎದ್ದು ದೂರದ ಗುವಾಹಟಿಯಲ್ಲಿ ಹೋಗಿ ಕುಳಿತಿರುವ ಶಿವಸೇನಾ ಶಾಸಕರಿಗೆ ಸಿಎಂ ಉದ್ಧವ್ ಠಾಕ್ರೆ ಅವರು ಒಂದೊಂದಾಗಿ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಬಂಡಾಯ ಎದ್ದಿರುವ ಶಿವಸೇನಾದ ಎಲ್ಲ ಶಾಸಕರ ಕುಟುಂಬಗಳಿಗೆ ನೀಡಿರುವ ವಿವಿಧ ರೀತಿಯ ಭದ್ರತೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ.
ಈ ವಿಧ್ಯಮಾನ ಬಂಡಾಯ ಶಾಸಕರನ್ನು ಕೆರಳುವಂತೆ ಮಾಡಿದ್ದು, ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು, ಸಿಎಂ ಠಾಕ್ರೆ ಅವರಿಗೆ ಪತ್ರ ಬರೆದು ನಮ್ಮ ಕುಟುಂಬಗಳಿಗೆ ಏನಾದರೂ ಆದರೆ ಅದಕ್ಕೆ ಸಂಪೂರ್ಣ ನೀವೇ ಹೊಣೆ ಎಂದು ಎಚ್ಚರಿಸಿದ್ದಾರೆ.
ಶಿವಸೇನಾದ 38 ಶಾಸಕರ ಕುಟುಂಬಗಳಿಗೆ ನೀಡಿರುವ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಶಿಂಧೆ ಅವರು ತಮ್ಮ ಪತ್ರವನ್ನು ಡಿಜಿಪಿ ಅವರಿಗೂ ಕಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಿವಸೇನಾದ ಸಂಸದ ಸಂಜಯ್ ರಾವುತ್ ಅವರು, ಶಾಸಕರಿಗೆ ಮಾತ್ರ ಭದ್ರತೆ ನೀಡಲಾಗುತ್ತದೆ. ಅವರ ಕುಟುಂಬದ ಭದ್ರತೆ ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಹೇಳಿದ್ದಾರೆ.
ಆದರೆ, ಶಿವಸೇನಾದ ಶಾಸಕರ ಕುಟುಂಬಗಳಿಗೆ ನೀಡಲಾದ ಭದ್ರತೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ಪಾಟೀಲ್ ಹೇಳಿದ್ದಾರೆ.
ಇನ್ನೊಂದೆಡೆ ಇಂದು ಮಧ್ಯಾಹ್ನ ಸಿಎಂ ಠಾಕ್ರೆ ಅವರು ಶಿವಸೇನಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.