ಶ್ರೀನಗರ: ಭಾರತ–ಪಾಕಿಸ್ತಾನ ಗಡಿಯ ಪೂಂಚ್ ಜಿಲ್ಲೆ, ಬಾಲಾಕೋಟ್ ಪ್ರದೇಶದಲ್ಲಿ ಪಾಕಿಸ್ತಾನದ ಸೈನಿಕರು ಕದನವಿರಾಮವನ್ನು ಉಲ್ಲಂಘಿಸಿ ದಾಳಿ ನಡೆಸಿದ್ದರಿಂದ 65ವರ್ಷ ವಯಸ್ಸಿನ ಒಬ್ಬ ಮಹಿಳೆ ಮೃತಪಟ್ಟು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬುಧವಾರ ನಸುಕಿನ 3 ಗಂಟೆಯ ಸುಮಾರಿಗೆ ಪಾಕಿಸ್ತಾನವು ಭಾರಿ ಪ್ರಮಾಣದಲ್ಲಿ ಶೆಲ್ಲಿಂಗ್ ನಡೆಸಿತ್ತು. ಇದರಿಂದ, ಸ್ಥಳೀಯ ನಿವಾಸಿಗಳಾದ ರೇಶಮ್ ಬಿ ಹಾಗೂ ಹಕಮ್ ಬಿ ಎಂಬ ಇಬ್ಬರು ಹಿರಿಯ ಮಹಿಳೆಯರು ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರೂ, ರೇಶಮ್ ಬಿ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
‘ಬಾಲಾಕೋಟ್ ಹಾಗೂ ಮೇಂಧರ್ ಪ್ರದೇಶದಲ್ಲಿ ಪಾಕಿಸ್ತಾನದ ಸೇನೆ ದಾಳಿ ಆರಂಭಿಸಿತ್ತು. ಭಾರತೀಯ ಸೇನೆಯು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಈಗ ದಾಳಿ ಸ್ಥಗಿತಗೊಂಡಿದೆ’ ಎಂದು ಸೇನೆಯ ವಕ್ತಾರ ಲೆ. ಕ. ದೇವೇಂದ್ರ ಆನಂದ್ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಕದನವಿರಾಮ ಉಲ್ಲಂಘನೆಯ ಪ್ರಕರಣಗಳು ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಜುಲೈ ತಿಂಗಳೊಂದರಲ್ಲೇ 411 ಘಟನೆಗಳು ನಡೆದಿವೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 2300 ಬಾರಿ ಪಾಕಿಸ್ತಾನ ಕದನವಿರಾಮವನ್ನು ಉಲ್ಲಂಘಿಸಿದೆ ಎಂದು ದಾಖಲೆಗಳು ಹೇಳುತ್ತವೆ. 2018ರಲ್ಲಿ 1629 ಹಾಗೂ 2019ರಲ್ಲಿ ಕದನವಿರಾಮ ಉಲ್ಲಂಘನೆಯ 3168 ಪ್ರಕರಣಗಳು ನಡೆದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.