ADVERTISEMENT

ಆನೆಗೆ ಬೆಂಕಿ ಹಚ್ಚಿದ ಕ್ರೂರಿಗಳು; ನೋವು ತಾಳಲಾರದೆ ಪ್ರಾಣಬಿಟ್ಟ ಗಜರಾಜ

ಪ್ರಜಾವಾಣಿ ವಿಶೇಷ
Published 23 ಜನವರಿ 2021, 3:39 IST
Last Updated 23 ಜನವರಿ 2021, 3:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಅತ್ಯಂತ ಕ್ರೂರವಾದ ಕೃತ್ಯವೊಂದರಲ್ಲಿ ತಮಿಳುನಾಡಿನ ಮುದುಮಲೈ ಹುಲಿ ಅಭಯಾರಣ್ಯ (ಎಂಟಿಆರ್) ಪ್ರದೇಶದ ಮಾಸಿನಗುಡಿಯಲ್ಲಿ ಆನೆಗೆ ಬೆಂಕಿ ಹಚ್ಚಿದ ದಾರುಣ ಘಟನೆ ನಡೆದಿದೆ. ನೋವು ತಾಳಲಾರದೆ ಗಜರಾಜ ಕೊನೆಗೆ ಪ್ರಾಣಬಿಟ್ಟಿದೆ.

ಮಾಸಿನಗುಡಿ ಪ್ರದೇಶದಲ್ಲಿಆನೆಯನ್ನು ಓಡಿಸುವ ರಾದ್ಧಾಂತದಲ್ಲಿ ಕಿಡಿಗೇಡಿಗಳುಬೆಂಕಿ ಹಚ್ಚಿದ ಬಟ್ಟೆಗಳನ್ನು ಎಸೆದಿದ್ದಾರೆ. ಹೊತ್ತಿ ಉರಿಯುತ್ತಿರುವ ಬಟ್ಟೆಯು ಆನೆಯ ಕಿವಿಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸುಟ್ಟ ಗಾಯಗಳಾಗಿದ್ದು, ಕೊನೆಗೆ ನೋವು ತಾಳಲಾರದೆ ಮೂರು ದಿನಗಳ ಬಳಿಕ ಪ್ರಾಣ ಬಿಟ್ಟಿದೆ.

ಸುಟ್ಟ ಗಾಯಗಳೊಂದಿಗೆ ಆನೆ ಕಾಡಿನತ್ತ ಓಡಿ ಹೋಯಿತು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ಆನೆಯ ಬೆನ್ನಿನ ಭಾಗ ಹಾಗೂ ಕಿವಿಗೆ ತೀವ್ರವಾದ ಸುಟ್ಟು ಗಾಯಗಳಾಗಿವೆ ಎಂದು ಅರಣ್ಯಧಿಕಾರಿಗಳು ತಿಳಿಸಿದ್ದಾರೆ. ದುರದೃಷ್ಟವಶಾತ್ ಜನವರಿ 19ರಂದು ವೈದ್ಯಕೀಯ ಚಿಕಿತ್ಸೆಗಾಗಿ ತೆಪ್ಪಕಾಡು ಆನೆ ಶಿಬಿರಕ್ಕೆ ಕೊಂಡೊಯ್ಯುವ ವೇಳೆಗೆ ಪ್ರಾಣ ಬಿಟ್ಟಿದೆ.

ಘಟನೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಮೂರನೇ ವ್ಯಕ್ತಿ ಪರಾರಿಯಾಗಿದ್ದಾನೆ.

ಬೆಂಕಿ ಹಚ್ಚಿದ ರಬ್ಬರ್ ಟೈರ್‌ಗಳನ್ನು ಆನೆಯ ಮೇಲೆ ಎಸೆಯಲಾಗಿದೆ ಎಂಬುದನ್ನು ಮುದುಮಲೈ ಹುಲಿ ಅಭಯಾರಣ್ಯದ ಡೆಪ್ಯೂಟಿ ಡೈರೆಕ್ಟರ್ ನಿರಾಕರಿಸಿದ್ದಾರೆ. ವಾಸ್ತವದಲ್ಲಿ ಬೆಂಕಿ ಹಚ್ಚಿದ ಬಟ್ಟೆಯನ್ನು ಎಸೆಯಲಾಗಿದೆ. ಇದನ್ನು ಆರೋಪಿಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆಹಾರವನ್ನು ಹರಸಿಕೊಂಡು ಕಾಡಾನೆಗಳು ನಾಡಿಗೆ ಪ್ರವೇಶಿಸುತ್ತಿರುವುದು ಸಾಮಾನ್ಯವಾಗಿದೆ. ಆದರೆ ಆನೆಗಳ ವಿರುದ್ಧ ಕ್ರೂರ ಕೃತ್ಯ ನಿರಂತರವಾಗಿ ಮುಂದುವರಿಯುತ್ತಲೇ ಇದೆ. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.