ಮುಂಬೈ: ಎಲ್ಗಾರ್ ಪರಿಷತ್– ಮಾವೊವಾದಿ ಸಂಪರ್ಕ ಪ್ರಕರಣದ ಆರೋಪಿ, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರು ಜಾಮೀನಿನ ಮೇಲೆ ಗುರುವಾರ ಬಿಡುಗಡೆಯಾದರು. ಮೂರು ವರ್ಷಗಳಿಂದಅವರು ಜೈಲಿನಲ್ಲಿದ್ದರು.
ಕೇಂದ್ರ ಸರ್ಕಾರವನ್ನು ಉರುಳಿಸುವ ಕ್ರಿಮಿನಲ್ ಪಿತೂರಿಯ ಆರೋಪ ಹೊತ್ತಿರುವ ಭಾರದ್ವಾಜ್ ಅವರಿಗೆ ಡಿ. 1 ರಂದು ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆರೋಪಿ ಬಿಡುಗಡೆಗೆ ಸಂಬಂಧಿಸಿದಂತೆ ವಿಧಿಸಬೇಕಾದ ಷರತ್ತುಗಳ ಬಗ್ಗೆ ನಿರ್ಧರಿಸಲು ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಎನ್ಐಎ ವಿಶೇಷ ನ್ಯಾಯಾಲಯವು ಸುಧಾ ಅವರನ್ನು ₹50,000ಗಳ ಬಾಂಡ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಬುಧವಾರ ಸೂಚಿಸಿತ್ತು. ಈ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಅವರು ಗುರುವಾರ ಮಧ್ಯಾಹ್ನ ಬೈಕುಲಾ ಮಹಿಳಾ ಜೈಲಿನಿಂದ ಹೊರನಡೆದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಅವರನ್ನು 2018 ಆ.27 ರಂದು ಬಂಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.