ADVERTISEMENT

ಜೈಲಿನಿಂದ ಹೊರಬಂದ ಆರೋಪಿಗಳಾದ ವೆರ್ನನ್, ಫೆರೀರಾ

ಎಲ್ಗಾರ್ ಪರಿಷತ್‌ –ಮಾವೋವಾದಿಗಳ ಜೊತೆ ಸಂಪರ್ಕ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಎಲ್ಗಾರ್ ಪರಿಷತ್‌ –ಮಾವೋವಾದಿಗಳ ಜೊತೆ ಸಂಪರ್ಕ ಪ್ರಕರಣದಲ್ಲಿ ಆರೋಪಿಗಳಾಗಿರುವ, ಹೋರಾಟಗಾರರಾದ ವೆರ್ನನ್ ಗೊನ್ಸಾಲ್ವೇಸ್ ಮತ್ತು ಅರುಣ್‌ ಫೆರೀರಾ ಇಲ್ಲಿನ ನವಿಮುಂಬೈನಲ್ಲಿರುವ ಜೈಲಿನಿಂದ ಶನಿವಾರ ಹೊರ ಬಂದರು.

ಈ ಇಬ್ಬರಿಗೆ ಸುಪ್ರೀಂಕೋರ್ಟ್‌ ಜುಲೈ 28ರಂದು ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ, ಅವರ ಬಿಡುಗಡೆಗೆ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿತ್ತು.

ತಲೋಜಾ ಜೈಲಿನಿಂದ ಹೊರಬರುತ್ತಿದ್ದಂತೆ, ಈ ಇಬ್ಬರು ಹೋರಾಟಗಾರರ ಬೆಂಬಲಿಗರು, ಸಂಬಂಧಿಗಳು ಅವರನ್ನು ಸ್ವಾಗತಿಸಿದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇವರ ಬಿಡುಗಡೆಯೊಂದಿಗೆ, ಈ ಪ್ರಕರಣದಲ್ಲಿ ಬಂಧಿತರಾಗಿರುವ 16 ಮಂದಿ ಪೈಕಿ ಐವರು ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಂತಾಗಿದೆ.

ಆರೋಪಿಗಳಲ್ಲೊಬ್ಬರಾದ ಸ್ಟ್ಯಾನ್‌ ಸ್ವಾಮಿ ಅವರು 2021ರ ಜುಲೈನಲ್ಲಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ಪ್ರಕರಣ 2017ರ ಡಿ.31ರಂದು ಪುಣೆಯಲ್ಲಿ ನಡೆದಿದ್ದ ಎಲ್ಗಾರ್‌ ಪರಿಷತ್‌ ಸಭೆಗೆ ಸಂಬಂಧಿಸಿದ್ದಾಗಿದೆ. ‘ಸಭೆಗೆ ಮಾವೋವಾದಿಗಳು ಆರ್ಥಿಕ ನೆರವು ನೀಡಿದ್ದರು. ಅಲ್ಲಿನ ಪ್ರಚೋದನಕಾರಿ ಭಾಷಣದಿಂದಾಗಿ ಭೀಮಾ– ಕೋರೆ ಗಾಂವ್‌ ಯುದ್ಧ ಸ್ಮಾರಕದ ಬಳಿ ಮಾರನೆ ದಿನ ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು’ ಎಂದು ಪೊಲೀಸರು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.