ಮುಂಬೈ: ‘ಶಿವಸೇನಾ(ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ನಡುವೆ ಯಾವುದೇ ಮೈತ್ರಿ ಘೋಷಣೆಯಾಗಿಲ್ಲ. ಆದರೆ, ಭಾವನಾತ್ಮಕ ಮಾತುಕತೆಗಳು ನಡೆಯುತ್ತಿವೆ’ ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವುತ್ ತಿಳಿಸಿದರು.
ಮೈತ್ರಿ ವದಂತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ‘ಉದ್ಧವ್ ಮತ್ತು ರಾಜ್ ಠಾಕ್ರೆ ಸಹೋದರ ಸಂಬಂಧಿಗಳಾಗಿದ್ದು, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಭೇಟಿಯಾಗುತ್ತಿರುತ್ತಾರೆ’ ಎಂದು ಹೇಳಿದರು.
‘ಮಹಾರಾಷ್ಟ್ರದ ಹಿತಾಸಕ್ತಿಯ ಬಗ್ಗೆ ರಾಜ್ ಠಾಕ್ರೆ ಅವರು ಮಾತನಾಡಿದ್ದಾರೆ. ಅದನ್ನೇ ಉದ್ಧವ್ ಅವರು ಮಾಡುತ್ತಿದ್ದಾರೆ. ಬಿಜೆಪಿಗೆ ಮತ್ತು ಅದರ ಜೊತೆ ಮೈತ್ರಿ ಮಾಡಿಕೊಂಡ ಪಕ್ಷಗಳಿಗೆ ಇದು ಹೊಂದುವುದಿಲ್ಲ’ ಎಂದು ತಿಳಿಸಿದರು.
‘ಬಿಜೆಪಿ ಮಹಾರಾಷ್ಟ್ರದ ಶತ್ರುವಾಗಿದ್ದು, ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡಿದ ಬಾಳಾ ಠಾಕ್ರೆ ಅವರ ಶಿವಸೇನಾ ಪಕ್ಷವನ್ನು ವಿಭಜಿಸಿದೆ’ ಎಂದು ಕಿಡಿಕಾರಿದರು.
‘ಮಹಾರಾಷ್ಟ್ರದ ಭಾಷೆ ಮತ್ತು ಸಂಸ್ಕ್ರತಿ ರಾಜಕೀಯ ವೈರತ್ವವನ್ನೂ ಮೀರಿದ್ದು’ ಎಂದು ರಾಜ್ ಠಾಕ್ರೆ ಮತ್ತು ಉದ್ಧವ್ ಅವರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಹೇಳಿರುವುದು ಮಹಾರಾಷ್ಟ್ರದ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ‘ಮಹಾರಾಷ್ಟ್ರ ಅಸ್ಮಿತೆ’ ರಾಜ್ ಮತ್ತು ಉದ್ಧವ್ ಅವರನ್ನು ಮತ್ತೆ ಒಂದಾಗಿಸುತ್ತಿದೆಯಾ? ಎಂಬ ಚರ್ಚೆಯನ್ನು ಹುಟ್ಟು ಹಾಕಿತ್ತು.
ಈ ನಡುವೆ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ್ದ ರಾಜ್ ಠಾಕ್ರೆ, ‘ನನ್ನ ಮತ್ತು ಉದ್ಧವ್ ನಡುವಿನ ಭಿನ್ನಾಭಿಪ್ರಾಯವು ಮಹಾರಾಷ್ಟ್ರದ ಹಿತದೃಷ್ಟಿಗೆ ಮಾರಕವಾಗಿದೆ ಎಂಬುದು ಸಾಬೀತದಾಗಿದೆ’ ಎಂದು ಹೇಳಿದ್ದರು. ಇದು ಮೈತ್ರಿ ಕುರಿತು ಇನ್ನಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.