ADVERTISEMENT

ಜನರ ಸಾವನ್ನು ನೋಡಿ ಕಣ್ಮುಚ್ಚಿಕೊಳ್ಳಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್

ದೆಹಲಿಗೆ ಆಕ್ಸಿಜನ್ ಪೂರೈಸಿ ಇಲ್ಲವೇ ನ್ಯಾಯಾಂಗ ನಿಂದನೆ ಎದುರಿಸುವಂತೆ ಕೇಂದ್ರಕ್ಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 15:17 IST
Last Updated 1 ಮೇ 2021, 15:17 IST
ಆಮ್ಲಜನಕ ಟ್ಯಾಂಕರ್ (ಪ್ರಾತಿನಿಧಿಕ ಚಿತ್ರ)
ಆಮ್ಲಜನಕ ಟ್ಯಾಂಕರ್ (ಪ್ರಾತಿನಿಧಿಕ ಚಿತ್ರ)   
ನವದೆಹಲಿ: ‘ರಾಜಧಾನಿ ದೆಹಲಿಗೆ 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಿ, ಇಲ್ಲವೇ ನ್ಯಾಯಾಂಗ ನಿಂದನೆಯನ್ನು ಎದುರಿಸಿ’ ಎಂದು ದೆಹಲಿ ಹೈಕೋರ್ಟ್ ಶನಿವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

‌‘ಪರಿಸ್ಥಿತಿ ಈಗಾಗಲೇ ಕೈಮೀರಿದೆ. ನೀವು ಈಗ ಎಲ್ಲವನ್ನೂ ವ್ಯವಸ್ಥೆ ಮಾಡಬೇಕು. ನೀವು ಆಮ್ಲಜನಕವನ್ನು ಹಂಚಿಕೆ ಮಾಡಿದ್ದೀರಿ. ಅದಕ್ಕೆ ತಕ್ಕಂತೆ ಪೂರೈಸಬೇಕು’ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಸೂಚಿಸಿತು.

ಆಮ್ಲಜನಕದ ತೀವ್ರ ಕೊರತೆಯಿಂದಾಗಿ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಶನಿವಾರ ವೈದ್ಯರೊಬ್ಬರು ಸೇರಿದಂತೆ 12 ಕೋವಿಡ್ ರೋಗಿಗಳು ಪ್ರಾಣ ಕಳೆದುಕೊಂಡ ಬಗ್ಗೆ ದುಃಖ ವ್ಯಕ್ತಪಡಿಸಿದ ನ್ಯಾಯಾಲಯವು, ‘ಇನ್ನು ಸಾಕು’ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

‘ದೆಹಲಿಯಲ್ಲಿ ಜನರು ಸಾಯುತ್ತಿರುವುದನ್ನು ನೋಡಿ ನಾವು ಕಣ್ಣುಮುಚ್ಚಿಕೊಂಡಿರುತ್ತೇವೆ’ ಎಂದು ನೀವು (ಕೇಂದ್ರ) ಭಾವಿಸಿದ್ದೀರಾ ಎಂದು ಪ್ರಶ್ನಿಸಿದ ನ್ಯಾಯಾಲಯವು, ಆಮ್ಲಜನಕ ಪೂರೈಸಿ ಇಲ್ಲವೇ ನ್ಯಾಯಾಂಗ ನಿಂದನೆಯನ್ನು ಎದುರಿಸಿ’ ಎಂದು ಎಚ್ಚರಿಕೆ ನೀಡಿತು.

ಮೇ 3ರಂದು ನ್ಯಾಯಾಲಯದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳ ಉಪಸ್ಥಿತಿಯನ್ನು ಕೋರಿದ ನ್ಯಾಯಪೀಠವು, ಇದನ್ನು ಪಾಲಿಸದಿದ್ದಲ್ಲಿ ನ್ಯಾಯಾಂಗ ನಿಂದನೆಯ ವಿಚಾರಣೆಯನ್ನು ಪ್ರಾರಂಭಿಸುವುದಾಗಿ ತಿಳಿಸಿತು.

‌ಸೋಮವಾರದವರೆಗೆ ಅಥವಾ ಅರ್ಧ ಗಂಟೆಯ ಕಾಲ ಈ ಆದೇಶವನ್ನು ಮುಂದೂಡಬೇಕು ಎನ್ನುವ ಕೇಂದ್ರ ಸರ್ಕಾರದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿತು.

ಇದನ್ನೂ ಓದಿ... ಕೋವಿಡ್: ಸೋಂಕು ಹರಡುವ ಬಗ್ಗೆ ವಿಜ್ಞಾನಿಗಳ ಎಚ್ಚರಿಕೆ ಕಡೆಗಣಿಸಿದ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.