ADVERTISEMENT

ಧರ್ಮವಲ್ಲ, ಕಾನೂನು ಪ್ರಕಾರ ಅಯೋಧ್ಯೆ ತೀರ್ಪು ನೀಡಿದ್ದೆ : ನಿವೃತ್ತ ಸಿಜೆಐ ಗೊಗೊಯಿ

ರಾಮ ಜನ್ಮಭೂಮಿ ವಿವಾದ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 14:15 IST
Last Updated 30 ನವೆಂಬರ್ 2021, 14:15 IST
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ   

ಲಖನೌ: ‘ರಾಮ ಜನ್ಮಭೂಮಿ ವಿವಾದ ಕುರಿತ ತೀರ್ಪು ಕಾನೂನು ಆಧಾರದ ಮೇಲೆ ನೀಡಲಾಗಿದೆ, ಧರ್ಮದ ಆಧಾರದ ಮೇಲೆ ಅಲ್ಲ’ ಎಂದು ಸುಪ್ರೀಂಕೋರ್ಟ್‌ನ ಹಿಂದಿನ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಹೇಳಿದ್ದಾರೆ.

ರಾಜ್ಯಸಭಾ ಸದಸ್ಯರೂ ಆಗಿರುವ ಅವರು, ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ನೀಡಿದ ತೀರ್ಪು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. ಅದು ಸುಪ್ರೀಂಕೋರ್ಟ್‌ನ ನಿರ್ಧಾರವಾಗಿತ್ತು’ ಎಂದು ಅವರು ಹೇಳಿದರು.

‘ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳು 3–4 ತಿಂಗಳ ಅವಧಿಯಲ್ಲಿ 900 ಪುಟಗಳ ತೀರ್ಪು ಬರೆದಿದ್ದಾರೆ. ದೇಶದ ಸಂವಿಧಾನ ಹಾಗೂ ಕಾನೂನಿನ ಆಧಾರದ ಮೇಲೆ ಈ ತೀರ್ಪನ್ನು ನೀಡಲಾಗಿತ್ತೇ ಹೊರತು ಧರ್ಮ ಆಧರಿಸಿ ಅಲ್ಲ’ ಎಂದ ಅವರು, ‘ಒಬ್ಬ ನ್ಯಾಯಾಧೀಶಗೆ ಸಂವಿಧಾನವೇ ಧರ್ಮವಾಗಿರುತ್ತದೆ’ ಎಂದು ಹೇಳಿದರು.

ADVERTISEMENT

ಗೊಗೊಯಿ ಅವರು ನಿವೃತ್ತಿ ಹೊಂದಿದ ಆರು ತಿಂಗಳ ನಂತರ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಅವರ ಈ ನಡೆಗೆ ವಿರೋಧ ಪಕ್ಷಗಳಿಂದ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿದ್ದವು. ಚುನಾವಣೆಗೆ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಆಗ ಅವರು ಸಮರ್ಥಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.