ಗಾಜಿಯಾಬಾದ್: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿ – ಉತ್ತರ ಪ್ರದೇಶ ರಾಜ್ಯದ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ಬರುವ ಮಾರ್ಚ್ನಲ್ಲಿ 5 ರಾಜ್ಯಗಳಿಗೆ ಭೇಟಿ ನೀಡಿ ರೈತರಿಂದ ಬೆಂಬಲ ಪಡೆಯಲಿದ್ದಾರೆ.
ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ನಡೆಯುವ ರೈತರ ಸಮಾವೇಶಗಳಲ್ಲಿ ರಾಕೇಶ್ ಟಿಕಾಯತ್ ಭಾಗವಹಿಸಲಿದ್ದಾರೆ. ಹಾಗೇ ಮಾರ್ಚ್ನಲ್ಲಿ ಉತ್ತರ ಪ್ರದೇಶದಲ್ಲಿ ಎರಡು ರೈತ ಸಮಾವೇಶಗಳನ್ನು ಆಯೋಜಿಸಲಾಗಿದ್ದು ಆ ಕಾರ್ಯಕ್ರಮಗಳಲ್ಲೂ ಅವರು ಪಾಲ್ಗೊಳುವರು ಎಂದು ಭಾರತೀಯ ಕಿಸಾನ್ ಒಕ್ಕೂಟದ ಪದಾಧಿಕಾರಿ ಧರ್ಮೇಂದ್ರ ಮಲಿಕ್ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಎರಡು ಮತ್ತು ಮಧ್ಯಪ್ರದೇಶದಲ್ಲಿ ಮೂರು ಸಭೆಗಳು ನಡೆಯಲಿವೆ. ಕೊನೆಯ ಮೂರು ಸಮಾವೇಶಗಳು ಮಾರ್ಚ್ 20, 21 ಮತ್ತು 22ರಂದು ಕರ್ನಾಟಕದಲ್ಲಿ ನಡೆಯಲಿವೆ ಎಂದು ಮಲಿಕ್ ತಿಳಿಸಿದ್ದಾರೆ.
'ತೆಲಂಗಾಣದಲ್ಲಿ ಮಾರ್ಚ್ 6ರಂದು ಸಮಾವೇಶ ನಿಗದಿಯಾಗಿದ್ದು, ಅಲ್ಲಿ ಚುನಾವಣೆ ಇರುವುದರಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಅನುಮತಿ ನೀಡಿದರೆ, ನಿಗದಿಯಂತೆ ತೆಲಂಗಾಣದಲ್ಲಿ ಸಭೆ ನಡೆಸಲಾಗುವುದು' ಎಂದು ಅವರು ತಿಳಿಸಿದರು.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಹೊಸ ಕಾಯ್ದೆ ರೂಪಿಸಬೇಕು ಎಂದು ಆಗ್ರಹಿಸಿ ಸಾವಿರಾರು ರೈತರು ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.