ADVERTISEMENT

17ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ಇಂದು ಉಪವಾಸ ಸತ್ಯಾಗ್ರಹ

ಏಜೆನ್ಸೀಸ್
Published 14 ಡಿಸೆಂಬರ್ 2020, 3:45 IST
Last Updated 14 ಡಿಸೆಂಬರ್ 2020, 3:45 IST
ರೈತರ ಪ್ರತಿಭಟನೆ (ಎಎನ್‌ಐ)
ರೈತರ ಪ್ರತಿಭಟನೆ (ಎಎನ್‌ಐ)   

ನವದೆಹಲಿ: ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಬೇಡಿಕೆ ಮುಂದಿರಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು 17ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿರುವ ರೈತರು, ಸೋಮವಾರದಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ರೈತರು ಹಾಗೂ ಸರಕಾರದ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಫಲ ಕೊಡಲಿಲ್ಲ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರಿಗೆ ಪ್ರತಿಭಟನೆ ಕೈಬಿಡುವಂತೆ ಕರೆ ನೀಡಿದರೂ ರೈತರು ತಮ್ಮ ನಿಲುವಿನಿಂದ ಕಿಂಚಿತ್ತು ಕದಲಲಿಲ್ಲ.

ಇದರ ಬದಲಿಗೆ ದೆಹಲಿ ಹಾಗೂ ಹರಿಯಾಣ ಗಡಿ ಪ್ರದೇಶಗಳಲ್ಲಿ ಮತ್ತಷ್ಟು ರೈತರು ಒಗ್ಗೂಡುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬೆಂಬಲ ಸೂಚಕವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.

ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಪ್ರತಿಭಟನೆ ನಿರತ ರೈತ ಪ್ರತಿಕ್ರಿಯಿಸುತ್ತಾ, ನಾವು ಕಬ್ಬಿನ ಟ್ರಾಲಿಗಳನ್ನು ಮಿಲ್‌ಗಳಿಗೆ ಕೊಂಡೊಯ್ಯುವಾಗ, 24 ತಾಸು ಊಟವನ್ನು ಬಿಟ್ಟುಬಿಡುತ್ತೇನೆ. ಈ ಉಪವಾಸಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.

ಈ ಮಧ್ಯೆ ರೈತರೊಬ್ಬರು ತಮ್ಮ ಮಗಳ ಹುಟ್ಟುಹಬ್ಬವನ್ನು ದೆಹಲಿ-ಹರಿಯಾಣ ಗಡಿಯಲ್ಲಿ ಆಚರಿಸಿದರು. ನಾವು ನಮ್ಮ ಮನೆಗಳನ್ನು ತೊರೆದಾಗ ವಿಜಯ ಸಿಗದೇ ಮನೆಗೆ ಹಿಂದಿರುಗುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದೆವು ಎಂದು ಮಗಳ ಅನುಪಸ್ಥಿತಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸುತ್ತಾ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.