ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ವಿಪಕ್ಷಗಳ ಮುಖಂಡರು ಆಡಳಿತಾರೂಢ ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ರೈತ ವಿರೋಧಿಯಾಗಿದೆ ಎಂದಿದ್ದು, ಮುಂದಿನ ದಿನಗಳಲ್ಲಿ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಗುಡುಗಿದ್ದಾರೆ.
ಸ್ವಾಮಿನಾಥನ್ ವರದಿ ಜಾರಿ ಹಾಗೂ ಪ್ರಧಾನ ಮಂತ್ರಿ ರಾಷ್ಟ್ರೀಯ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ದೇಶದ ಮೂಲೆ ಮೂಲೆಗಳಿಂದ ರೈತರು ಜಮಾಯಿಸಿ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎರಡನೇ ದಿನ ಶುಕ್ರವಾರವೂ ಪ್ರತಿಭಟನೆ ಮುಂದುವರಿದಿದೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ, ಸಿಪಿಐ(ಎಂ) ಮುಖಂಡ ಸೀತಾರಾಂ ಯಚೂರಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರ ವಿಪಕ್ಷಗಳ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಚುನಾವಣೆ ಬಂದಾಗ ರಾಮ ರಾಮ ಎನ್ನುವ ಬಿಜೆಪಿ: ಯಚೂರಿ
‘ಬಿಜೆಪಿ, ಆರ್ಎಸ್ಎಸ್, ಮೋದಿ ಕೈಯಲ್ಲಿ ರಾಮ ಮಂದಿರ ಎಂಬ ಅಸ್ತ್ರಹಿಡಿದಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗ ಅದನ್ನು ಪ್ರಸ್ತಾಪಿಸುತ್ತಾರೆ. ರಾಮ.. ರಾಮ.. ಎಂದು ಜಪಿಸಲು ಆರಂಭಿಸುತ್ತಾರೆ. ರೈತರ ಪರವಾದ ಕಾರ್ಯಗಳನ್ನು ಮಾಡುತ್ತಿಲ್ಲ ಎಂದು‘ ಎಂದು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ದೂರಿದರು.
‘ರೈತರು ತಮ್ಮ ಮೇಳಿನ ಋಣಭಾರವನ್ನು ಕಳೆದುಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿಯಾಗಿದ್ದು, ಅದನ್ನು ಕಿತ್ತೊಗೆಯಬೇಕು. ದೊಡ್ಡ ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಸಮಯವಿದೆ. ರೈತರ ಸಮಸ್ಯೆಗಳ ಬಗ್ಗೆ ಕಿವುಡಗಾರಿದ್ದು, ಜಾಣ ಮೌನ ವಹಿಸಿದ್ದಾರೆ ಎಂದು ಆಪಾದಿಸಿದ ಯಚೂರಿ, ಸರ್ಕಾರ ರೈತರು ಬಿಕ್ಕಟ್ಟಿನಿಂದ ಹೊರಬಂದು ಚೇತರಿಸಿಕೊಳ್ಳಲು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮೋದಿ ಶ್ರೀಮಂತರ ಪರ ನಿಂತಿದ್ದಾರೆ ಆದರೆ, ದೇಶದ ರೈತರೇ ಇಲ್ಲಿ ಬಂದು ನಿಂತಿದ್ದಾರೆ. ಇದು ದೇಶದ ಇತಿಹಾಸದಲ್ಲಿ ಅಮೂಲಾಗ್ರ ಕ್ಷಣವಾಗಿದೆ. ಪ್ರತಿಯೊಬ್ಬ ಪ್ರಜೆಯೂ ದೇಶದಲ್ಲಿ ರಾಜಕೀಯ ಬದಲಾವಣೆಯನ್ನು ಎದುರು ನೋಡುತ್ತಿದ್ದಾ ಎಂದು ಹೇಳಿದರು.
ರೈತ ವಿರೋಧಿ ಮೋದಿ ಸರ್ಕಾರ ಅದಕ್ಕೆ ತಕ್ಕ ದಂಡವನ್ನೂ ತೆರಲೇಬೇಕು. ಇದರ ಉದ್ದೇಶ ಸ್ಪಷ್ಟವಾಗಿದೆ. ಮೋದಿ ಸರ್ಕಾರವನ್ನು ಕಿತ್ತೊಗೆದು, ಜನಸಾಮಾನ್ಯರನ್ನು, ಬಡ ರೈತರನ್ನು ಬೆಂಬಲಿಸಿ ನೀತಿ ರೂಪಿಸುವ ಪರ್ಯಾಯ ಜಾತ್ಯಾತೀತ ಸರ್ಕಾರ ತರುವುದು ಅಗತ್ಯ ಎಂದು ಹೇಳಿದರು.
* ಇದನ್ನೂ ಓದಿ...
ಬೆಂಬಲಬೆಲೆ ಯೋಜನೆ ಅಡಿ ರೈತರ ಉತ್ಪನ್ನಗಳನ್ನು ಖರೀದಿಸಲು ಆಯಾ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವರ್ಷವಿಡೀ ಖರೀದಿ ಕೇಂದ್ರ ತೆರೆಯುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಬೆಂಬಲಬೆಲೆಗೆ ನಿಗದಿಪಡಿಸಲಾದ ಆವರ್ತನಿಧಿಗೆ ಸೂಕ್ತ ಅನುದಾನವನ್ನು ರಾಜ್ಯ ಸರ್ಕಾರಗಳಿಗೆ ಮಂಜೂರು ಮಾಡಬೇಕು. ರೈತರ ಸಮಸ್ಯೆಗಳನ್ನು ಚರ್ಚಿಸುವುದಕ್ಕಾಗಿಯೇ 21 ದಿನಗಳ ಸಂಸತ್ ಅಧಿವೇಶನ ಕರೆಯಬೇಕೆಂಬುದು ಇನ್ನೊಂದು ಪ್ರಮುಖ ಬೇಡಿಕೆಯಾಗಿದೆ.
* ಇದನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.