ADVERTISEMENT

ಸರ್ಕಾರದ ಜತೆ ಮಾತುಕತೆ ನಡೆಸಲು ಐವರ ಸಮಿತಿ ರಚನೆ: ಎಸ್‌ಕೆಎಂ

ಪಿಟಿಐ
Published 4 ಡಿಸೆಂಬರ್ 2021, 14:36 IST
Last Updated 4 ಡಿಸೆಂಬರ್ 2021, 14:36 IST
ರಾಕೇಶ್‌ ಟಿಕಾಯತ್‌
ರಾಕೇಶ್‌ ಟಿಕಾಯತ್‌   

ನವದೆಹಲಿ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಐವರು ಸದಸ್ಯರ ಸಮಿತಿಯನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಚಿಸಿದೆ.

ರೈತ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್, ಅಶೋಕ್ ಧಾವ್ಲೆ, ಶಿವಕುಮಾರ್ ಕಾಕ್ಕಾ, ಗುರ್ನಾಮ್ ಸಿಂಗ್ ಚದುನಿ ಮತ್ತು ಯುಧ್ವೀರ್ ಸಿಂಗ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ಶನಿವಾರ ನಡೆದ ಸಭೆಯಲ್ಲಿ ಹೆಸರಿಸಲಾಯಿತು ಎಂದು ಎಸ್‌ಕೆಎಂ ಮುಖಂಡ ರಾಕೇಶ್‌ ಟಿಕಾಯತ್‌ ತಿಳಿಸಿದರು.

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ಪರಿಹಾರ ಹಾಗೂ ಪ್ರತಿಭಟನನಿರತ ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ವಿಷಯವನ್ನೂ ಈ ಸಮಿತಿ ಸದಸ್ಯರು ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ ಎಂದರು.

ADVERTISEMENT

ಮುಂದಿನ ಹೋರಾಟದ ಹಾದಿಯನ್ನು ನಿರ್ಧರಿಸುವ ಸಂಬಂಧ ಇದೇ 7ರಂದು ಬೆಳಿಗ್ಗೆ 11 ಗಂಟೆಗೆ ಮೋರ್ಚಾದ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ರೈತರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಹಿಂಪಡೆಯುವವರೆಗೆ ಇಲ್ಲಿನ ಸಿಂಘು ಗಡಿಯಿಂದ ಕದಲುವುದಿಲ್ಲ. ಈ ಕುರಿತು ಸರ್ಕಾರದಿಂದ ಲಿಖಿತವಾಗಿ ಭರವಸೆ ದೊರೆಯಬೇಕು ಎಂದು ಸಭೆಯ ಬಳಿಕ ರೈತ ಮುಖಂಡರು ಆಗ್ರಹಿಸಿದರು.

ವಿವಿಧ ರಾಜ್ಯಗಳ ಸರ್ಕಾರಗಳೊಂದಿಗೆ ಮಾತುಕತೆಯನ್ನು ಯಾರು ನಡೆಸಬೇಕು ಎಂಬುದನ್ನು ಸಮಿತಿ ನಿರ್ಧರಿಸಲಿದೆ ಎಂದರು.

ರೈತ ಮುಖಂಡ ಅಶೋಕ ಧಾವ್ಲೆ ಮಾತನಾಡಿ, ಹುತಾತ್ಮ ರೈತರಿಗೆ ನೀಡಬೇಕಾದ ಪರಿಹಾರ, ರೈತರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳ ಬಗ್ಗೆ ಹಾಗೂ ಲಖಿಂಪುರ್ ಖೇರಿ ಘಟನೆಯ ಕುರಿತು ಶನಿವಾರದ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.