ADVERTISEMENT

ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ: ಪಂಜಾಬ್‌ ಬಂದ್‌ಗೆ ವ್ಯಾಪಕ ಬೆಂಬಲ

ಪಿಟಿಐ
Published 25 ಸೆಪ್ಟೆಂಬರ್ 2020, 7:45 IST
Last Updated 25 ಸೆಪ್ಟೆಂಬರ್ 2020, 7:45 IST
ಕೃಷಿ ಮಸೂದೆ ವಿರೋಧಿಸಿ ಕರೆ ನೀಡಿದ್ದ ‘ಭಾರತ್ ಬಂದ್‌‘ ನಿಂದಾಗಿ ಪಂಜಾಬ್‌ನ ಅಮೃತ್‌ಸರದಲ್ಲಿ ಶುಕ್ರವಾರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಪೊಲೀಸರು ಗಸ್ತು ತಿರುಗುತ್ತಿರುವುದು.
ಕೃಷಿ ಮಸೂದೆ ವಿರೋಧಿಸಿ ಕರೆ ನೀಡಿದ್ದ ‘ಭಾರತ್ ಬಂದ್‌‘ ನಿಂದಾಗಿ ಪಂಜಾಬ್‌ನ ಅಮೃತ್‌ಸರದಲ್ಲಿ ಶುಕ್ರವಾರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಪೊಲೀಸರು ಗಸ್ತು ತಿರುಗುತ್ತಿರುವುದು.   

ಚಂಡೀಗಡ: ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಗೊಂಡ ಕೃಷಿ ಮಸೂದೆಗಳನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ‘ಪಂಜಾಬ್ ಬಂದ್‘‌ ಭಾಗವಾಗಿ ಶುಕ್ರವಾರ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಭಾರತೀಯ ಕಿಸಾನ್‌ ಯೂನಿಯನ್ (ಬಿಕೆಯು) ಅಡಿಯಲ್ಲಿ 31 ವಿವಿಧ ರೈತ ಪರ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದ್ದು, ಚಂಡೀಗಡದಾದ್ಯಂತ ಅಂಗಡಿಮುಂಗಟ್ಟುಗಳು ಬಂದ್‌ ಮಾಡಲಾಗಿತ್ತು.

ರೈತ ಸಂಘಟನೆಗಳಲ್ಲದೇ, ಭಾರತೀಯ ಕಿಸಾನ್ ಯೂನಿಯನ್ ಕ್ರಾಂತಿಕಾರಿ, ಕಿರ್ತಿ ಕಿಸಾನ್ ಯೂನಿಯನ್, ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಹಣ್), ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮತ್ತು ಬಿಕೆಯು (ಲಖೊವಾಲ್) ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಹರಿಯಾಣದ ಕೆಲವು ರೈತಪರ ಸಂಘಟನೆಗಳು ಕೃಷಿ ಮಸೂದೆಗಳನ್ನು ವಿರೋಧಿಸಿ ಶುಕ್ರವಾರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಾರ್ಟಿ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ADVERTISEMENT

ಅಮೃತಸರದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಬ್ಯಾನರ್ ಅಡಿಯಲ್ಲಿ ಮಹಿಳೆಯರೂ ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಉಂಟು ಮಾಡಿದ ಗದ್ದಲದಿಂದಾಗಿ ಪಂಜಾಬ್‌ನ ಅನೇಕ ಸ್ಥಳಗಳಲ್ಲಿ ಅಂಗಡಿ ಮುಂಗಟ್ಟುಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಚೇರಿ ಬಂದ್ ಮಾಡಲಾಯಿತು.ಪಂಜಾಬ್ ಬಂದ್ ಕರೆಗೆ ಸರ್ಕಾರಿ ನೌಕರರ ಸಂಘಗಳು, ಗಾಯಕರು, ಕಮಿಷನ್ ಏಜೆಂಟ್‌ಗಳು, ಕಾರ್ಮಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.