ADVERTISEMENT

ಪಂಜಾಬ್: ಕೇಂದ್ರದ ಹೊಸ ಕೃಷಿ ಕಾನೂನಿನ ಪ್ರತಿಯನ್ನು ಸುಟ್ಟ ಪ್ರತಿಭಟನಾನಿರತ ರೈತರು

ಪಿಟಿಐ
Published 5 ಜೂನ್ 2021, 10:56 IST
Last Updated 5 ಜೂನ್ 2021, 10:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡೀಗಡ: ಕಳೆದ ವರ್ಷ ಕೃಷಿ ಕಾನೂನುಗಳನ್ನು ಸುಗ್ರೀವಾಜ್ಞೆಯಾಗಿ ಘೋಷಿಸಿದ ದಿನದ ಅಂಗವಾಗಿ 'ಸಂಪೂರ್ಣ ಕ್ರಾಂತಿ ದಿವಸ್' ಆಚರಿಸಿದ ರೈತರು ಬಿಜೆಪಿ ನಾಯಕರ ನಿವಾಸಗಳ ಬಳಿ ಮತ್ತು ಪಂಜಾಬ್‌ನ ಇತರ ಸ್ಥಳಗಳಲ್ಲಿ ಶನಿವಾರ ಕೇಂದ್ರದ ಮೂರು ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟುಹಾಕಿದರು.

ಕಪ್ಪು ಧ್ವಜಗಳನ್ನು ಹೊತ್ತ ರೈತರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೃಷಿ ಕಾನೂನುಗಳನ್ನು ರದ್ದುಗೊಳಿಸದ ಕಾರಣ ಘೋಷಣೆಗಳನ್ನು ಕೂಗಿದರು. ಇದು ಕೃಷಿ ಸಮುದಾಯವನ್ನು 'ನಾಶಪಡಿಸುತ್ತದೆ' ಎಂದು ಅವರು ಹೇಳಿದರು.

ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಪ್ರತಿಭಟನಾ ಸ್ಥಳಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಲಾಯಿತು.

ADVERTISEMENT

ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ, ಈ ದಿನವನ್ನು 'ಸಂಪೂರ್ಣ ಕ್ರಾಂತಿ ದಿವಸ್' ಆಗಿ ಆಚರಿಸಲು ಕರೆ ನೀಡಿದೆ.

ಫಾಗ್ವಾರಾದ ಅರ್ಬನ್ ಎಸ್ಟೇಟ್‌ನಲ್ಲಿ ಕೇಂದ್ರ ಸಚಿವ ಸೋಮಪ್ರಕಾಶ್ ಅವರ ನಿವಾಸದ ಬಳಿ ರೈತರು ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟುಹಾಕಿದರು. ಜಿಟಿ ರಸ್ತೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸಚಿವರ ನಿವಾಸದ ಕಡೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು ಅಲ್ಲಿಗೆ ಬರದಂತೆ ತಡೆಯಲು ಪೊಲೀಸರು ಪ್ರಕಾಶ್ ಅವರ ಮನೆಗೆ ಹೋಗುವ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆಯ ಸಮಯದಲ್ಲಿ ಕೇಂದ್ರ ಸಚಿವರು ಮನೆಯಲ್ಲಿ ಇರಲಿಲ್ಲ.

ಆಕ್ರೋಶಗೊಂಡ ರೈತರು ಮೊಹಾಲಿ ಜಿಲ್ಲೆಯ ಪ್ರಕಾಶ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಿ ಸಚಿವರ ಮನೆಯ ಹೊರಗೆ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

ಚಂಡೀಗಡದಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸದ ಕಾರಣ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.