ADVERTISEMENT

ರೈತರ ಪ್ರತಿಭಟನೆ ಸರ್ಕಾರದ ಮೇಲಿನ ನಂಬಿಕೆ ಕೊರತೆಯ ಸೂಚಕ: ಅಭಿಜಿತ್ ಬ್ಯಾನರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2020, 11:20 IST
Last Updated 11 ಡಿಸೆಂಬರ್ 2020, 11:20 IST
ಅಭಿಜಿತ್ ಬ್ಯಾನರ್ಜಿ (ಎಎಫ್‌ಪಿ ಚಿತ್ರ)
ಅಭಿಜಿತ್ ಬ್ಯಾನರ್ಜಿ (ಎಎಫ್‌ಪಿ ಚಿತ್ರ)   

ನವದೆಹಲಿ: ಒಕ್ಕೂಟ ವ್ಯವಸ್ಥೆ ಮತ್ತು ಸರ್ಕಾರದ ಮೇಲಿನ ನಂಬಿಕೆ ಕೊರತೆ ಬಗ್ಗೆ ಮಾತನಾಡಿರುವ ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ, ಸರ್ಕಾರದ ನಡೆಗಳ ಮೇಲಿನ ಅನುಮಾನವೇ ರೈತರ ಪ್ರತಿಭಟನೆಗೆ ಆರಣ ಎಂದು ಹೇಳಿದ್ದಾರೆ.

ವಿವಿಧ ರಾಜ್ಯಗಳ ರೈತರು ದೆಹಲಿಯ ಸಿಂಘು, ತಿಕ್ರಿ, ಗಾಝಿಪುರ ಹಾಗೂ ಚಿಲ್ಲಾ ಗಡಿಗಳಲ್ಲಿ ಎರಡು ವಾರಗಳಿಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

‘ರೈತರು ಸರ್ಕಾರದ ಉದ್ದೇಶಗಳ ಬಗ್ಗೆ ಅನುಮಾನದಿಂದ ವರ್ತಿಸುತ್ತಿದ್ದಾರೆ. ಈ ಸುಧಾರಣೆಗಳು ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿಲ್ಲ. ಬದಲಿಗೆ, ಅದಕ್ಕಿಂತ ಹೆಚ್ಚಿನದ್ದೇನೋ ಆಗಿರಲಿದೆ. ಇನ್ನೇನೋ ಹೆಚ್ಚು ಕೆಟ್ಟದ್ದಾಗಲಿದೆ ಎಂದು ಅವರು ಹೇಳುತ್ತಿದ್ದಾರೆ’ ಎಂದು ಮಾಧ್ಯಮ ಸಂಸ್ಥೆಯೊಂದರ ‘ನಾಯಕತ್ವ ಶೃಂಗಸಭೆ’ಯಲ್ಲಿಅಭಿಜಿತ್‌ ಹೇಳಿದ್ದಾರೆ.

ADVERTISEMENT

ಸರ್ಕಾರ ಮತ್ತು ಜನರ ನಡುವಣ ನಂಬಿಕೆಯ ಕೊರತೆ ಬಗ್ಗೆ ಪುನರುಚ್ಚರಿಸಿದ ಅವರು, ಜನರಿಂದ ತುಂಬ ದೂರದಲ್ಲಿರುವವರು, ಕಡಿಮೆ ಸಂಪರ್ಕ ಹೊಂದಿರುವವರು ದೊಡ್ಡ ಶಾಸನಗಳನ್ನು ಮಾಡಿದಾಗ ಏನಾಗುತ್ತದೆ ಎಂಬುದಕ್ಕೆ ರೈತರ ಪ್ರತಿಭಟನೆ ಉದಾಹರಣೆ ಎಂದು ಹೇಳಿದ್ದಾರೆ.

ಕಾಯ್ದೆಗಳಿಗೆ ತಿದ್ದುಪಡಿ ತರುವ ಸರ್ಕಾರದ ಪ್ರಸ್ತಾವ ತಿರಸ್ಕರಿಸಿರುವ ರೈತರು ರದ್ದುಪಡಿಸಬೇಕೆಂದು ಪಟ್ಟುಹಿಡಿದಿದ್ದಾರೆ. ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ದೇಶದಾದ್ಯಂತ ರೈಲು ತಡೆ ಮಾಡುವುದಾಗಿಯೂ ಎಚ್ಚರಿಕೆಯನ್ನೂ ನೀಡಿದ್ದಾರೆ. ಪಂಜಾಬ್‌ನಲ್ಲಿ ಈಗಾಗಲೇ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.