ಪ್ರಾತಿನಿಧಿಕ ಚಿತ್ರ
ಕೃಪೆ: ಐಸ್ಟಾಕ್
ಭೋಪಾಲ್: ಅಕ್ರಮ ಗಣಿಕಾರಿಕೆಗೆ ವಿರೋಧ ವ್ಯಕ್ತಪಡಿಸಿದ ದಲಿತಗೆ ಥಳಿಸಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 45 ಕಿ.ಮೀ. ದೂರದಲ್ಲಿರುವ ಮತ್ವಾರಾ ಗ್ರಾಮದಲ್ಲಿ ಅಕ್ಟೋಬರ್ 14ರಂದು ಘಟನೆ ನಡೆದಿದೆ. ಈ ಗ್ರಾಮವು ಬಾಹೋರಿಬಂದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
'ರಾಮಾನುಜ ಪಾಂಡೆ, ರಾಮ್ ಬಿಹಾರಿ ಪಾಂಡೆ, ಪವನ್ ಪಾಂಡೆ ಹಾಗೂ ಸತೀಶ್ ಪಾಂಡೆ ಎಂಬವರು ರಾಜ್ಕುಮಾರ್ ಚೌಧರಿ ಎಂಬವರನ್ನು ಥಳಿಸಿ, ಅವಮಾನಿಸಿದ್ದಾರೆ. ಇವರೆಲ್ಲರೂ ಮತ್ವಾರಾ ಗ್ರಾಮದವರೇ. ಈ ಸಂಬಂಧ ಎಸ್ಸಿ–ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳು ಪರಾರಿಯಾಗಿದ್ದಾರೆ. ಬಂಧನಕ್ಕೆ ಬಲೆ ಬೀಸಿದ್ದೇವೆ' ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ದೇಹಾರಿಯಾ ತಿಳಿಸಿದ್ದಾರೆ.
ಗ್ರಾಮದ ಸರಪಂಚ್ ಮಗನಾಗಿರುವ ಪವನ್ ಪಾಂಡೆ ಎಂಬವರು ತಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ. ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.
ಆರೋಪಿಗಳ ತಮ್ಮ ಹೊಲದ ಹತ್ತಿರವೇ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅದನ್ನು ಆರೋಪಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಚೌಧರಿ ಹೇಳಿದ್ದಾರೆ.
ಕತ್ನಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಸಿಧಿ ಜಿಲ್ಲೆಯಲ್ಲಿ 2023ರಲ್ಲೂ ಇಂತಹದ್ದೇ ಪ್ರಕರಣ ವರದಿಯಾಗಿತ್ತು. ಅದೇ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ಭಾರಿ ಚರ್ಚೆಯಾಗಿತ್ತು. ಸಿಧಿಯಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.