ADVERTISEMENT

ಮುಂಬೈ ಕಚೇರಿಯಲ್ಲಿ ಅಗ್ನಿ ಅವಘಡ: ಕಡತಗಳ ಡಿಜಿಟಲ್‌ ಸಂಗ್ರಹವಿದೆ ಎಂದ ED

ಪಿಟಿಐ
Published 29 ಏಪ್ರಿಲ್ 2025, 0:43 IST
Last Updated 29 ಏಪ್ರಿಲ್ 2025, 0:43 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ನವದೆಹಲಿ: ಮುಂಬೈನ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕೆಲವು ದಾಖಲೆಗಳು ಮತ್ತು ಪೀಠೋಪಕರಣಗಳು ಸುಟ್ಟುಹೋಗಿವೆ. ಆದರೆ ಕಡತಗಳ ಡಿಜಿಟಲ್‌ ಸಂಗ್ರಹವೂ ಇರುವುದರಿಂದ ಪ್ರಕರಣಗಳ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಸ್ಪಷ್ಟಪಡಿಸಿದೆ.

ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದ ಕೈಸರ್‌ 1– ಹಿಂದ್‌ ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದ ಇ.ಡಿ ಕಚೇರಿಯಲ್ಲಿ ಭಾನುವಾರ ಮುಂಜಾನೆ 2.25ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಇದಕ್ಕೆ ಶಾರ್ಟ್‌ ಸರ್ಕೀಟ್‌ ಕಾರಣ ಎಂದು ತಿಳಿದುಬಂದಿದೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.

ಅಗ್ನಿ ಅವಘಡ: ರಾಜಕೀಯ ವಾಕ್ಸಮರ

ADVERTISEMENT

ಇ.ಡಿ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅವಘಡವು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ಒಂದೇ ಒಂದು ಕಾಗದಪತ್ರವೂ ಸುಟ್ಟುಹೋಗಿಲ್ಲ ಎಂದು ಹೇಳಿದ್ದಾರೆ.

ಅಗ್ನಿ ಅವಘಡದಿಂದ ಯಾವುದೇ ಪ್ರಕರಣದ ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಎನ್‌ಸಿಪಿ (ಶರದ್‌ ಬಣ) ಸಂಸದೆ ಸುಪ್ರಿಯಾ ಸುಳೆ ಅವರು, ಬೆಂಕಿ ನಂದಿಸಲು ವಿಳಂಬ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಅಷ್ಟು ಮುಖ್ಯವಾದ ಕಚೇರಿಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇರಲಿಲ್ಲವೇ? ಜಗತ್ತೇ ಡಿಜಿಟಲ್‌ಮಯವಾಗಿದೆ. ಅಂಥದ್ದರಲ್ಲಿ ಕಡತಗಳ ಬ್ಯಾಕ್‌ಅಪ್‌ ಸಾಧ್ಯವಾಗದಿದ್ದರೆ ಅದು ಆಘಾತಕಾರಿ ಎಂದು ಹೇಳಿದ್ದಾರೆ.

ಇ.ಡಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ಗಂಭೀರ ವಿಚಾರ. ಅದು ಹೆಚ್ಚು ಜನಸಂದಣಿ ಇರದ ಪ್ರದೇಶ. ಅವಘಡ ಸಂಭವಿಸಿದ ನಂತರ ಎಷ್ಟು ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದರು ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಹರ್ಷವರ್ಧನ್‌ ಸಪಕಾಲ್‌ ಅವರು, ಇ.ಡಿಯು ತನ್ನದೇ ಕಚೇರಿಯಲ್ಲಿ ಕಡತಗಳನ್ನು ಸುಟ್ಟು ಹಾಕಿದೆ. ರಾಜಕೀಯ ಲಾಭಕ್ಕಾಗಿ ಇ.ಡಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗ್ನಿ ಅವಘಡದ ನಂತರ ಕೆಲವು ವ್ಯಕ್ತಿಗಳ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.