ಗ್ಯಾಂಗ್ಟಕ್: ಕೈಲಾಸ– ಮಾನಸ ಸರೋವರದ ಯಾತ್ರೆ ಕೈಗೊಂಡಿರುವ 36 ಯಾತ್ರಾರ್ಥಿಗಳ ಮೊದಲ ತಂಡವು ಸಿಕ್ಕಿಂನ ಗ್ಯಾಂಗ್ಟಕ್ಗೆ ತಲುಪಿದೆ. 6 ವರ್ಷಗಳ ಬಳಿಕ ನಡೆಯುತ್ತಿರುವ ಮೊದಲ ಯಾತ್ರೆ ಇದಾಗಿದ್ದು, ಜೂ.20ರಂದು ಯಾತ್ರಾರ್ಥಿಗಳು ಭಾರತ–ಚೀನಾ ಗಡಿ ದಾಟಲಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಯಾತ್ರಾರ್ಥಿಗಳ ಜತೆಗೆ ವಿದೇಶಾಂಗ ಸಚಿವಾಲಯದ ಇಬ್ಬರು ಅಧಿಕಾರಿಗಳೂ ಇದ್ದಾರೆ. ಅವರೆಲ್ಲರೂ ಭಾನುವಾರವೇ ಗ್ಯಾಂಗ್ಟಕ್ ತಲುಪಿದ್ದು, ಇಲ್ಲಿಂದ 27 ಕಿ.ಮೀ. ದೂರದಲ್ಲಿರುವ 17 ಮೈಲ್ ಪ್ರದೇಶಕ್ಕೆ ಸೋಮವಾರ ಪ್ರಯಾಣ ಬೆಳೆಸಿದ್ದಾರೆಂದೂ ಅಧಿಕಾರಿಗಳು ಹೇಳಿದ್ದಾರೆ.
2020ರಲ್ಲಿ ಭಾರತ–ಚೀನಾ ನಡುವಿನ ಗಡಿ ಬಿಕ್ಕಟ್ಟಿನಿಂದಾಗಿ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಉಭಯ ರಾಷ್ಟ್ರಗಳ ಮಾತುಕತೆಯ ಬಳಿಕ ಯಾತ್ರೆ ಮತ್ತೆ ಶುರುವಾಗಿದೆ. ಈ ಬಾರಿ 750 ಮಂದಿ ಯಾತ್ರೆಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ 500 ಮಂದಿಯ 10 ತಂಡವು ಸಿಕ್ಕಿಂನ ನಾಥು ಲಾ ಪಾಸ್ ಮಾರ್ಗವಾಗಿ ಮಾನಸ ಸರೋವರ ತಲುಪಲಿದೆ. 250 ಮಂದಿಯು ಉತ್ತರಾಖಂಡದ ಲಿಪುಲೇಖ್ ಪಾಸ್ ಮಾರ್ಗವಾಗಿ ತೆರಳಲಿದ್ದಾರೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.