ನವದೆಹಲಿ: ಅನುಮಾನಾಸ್ಪದ ರೀತಿಯಲ್ಲಿಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.
ಈಶಾನ್ಯ ದೆಹಲಿಯ ಶಂಭು (45) ಹಾಗೂ ಪತ್ನಿ ಮೂವರು ಮಕ್ಕಳು ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ.ಆಶ್ಚರ್ಯಕರ ಸಂಗತಿ ಎಂದರೆ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಬ್ಬರದ ಪ್ರಚಾರನಡೆದಿದ್ದರೂ ಈ ಕುಟುಂಬದ ಬಗ್ಗೆ ಯಾರೂ ಗಮನ ಹರಿಸಿಲ್ಲ.
ಶಂಭು ವೃತ್ತಿಯಲ್ಲಿ ಆಟೋಚಾಲಕನಾಗಿದ್ದು, ಆರು ದಿನಗಳ ಹಿಂದೆ ಈ ಸಾವು ಸಂಭವಿಸಿದೆ ಎಂದು ಡಿಸಿಪಿ ವೇದಪ್ರಕಾಶ್ ಸೂರ್ಯ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಐದು ಮಂದಿಯ ಶವಗಳಿದ್ದ ಮನೆಯಿಂದ ದುರ್ವಾಸನೆ ಬರುತ್ತಿದ್ದು, ಅಕ್ಕಪಕ್ಕದವರು ಇದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಒಂದು ಕೊಠಡಿಯಲ್ಲಿ ಇಬ್ಬರ ಶವ, ಮತ್ತೊಂದು ಕೊಠಡಿಯಲ್ಲಿ ಮೂವರ ಶವಗಳಿದ್ದವು. ಒಂದು ಕೊಠಡಿಗೆಒಳಗಿನಿಂದ ಚಿಲಕ ಹಾಕಲಾಗಿದೆ. ಮತ್ತೊಂದು ಕೊಠಡಿಗೆ ಹೊರಗಿನಿಂದ ಚಿಲಕ ಹಾಕಲಾಗಿದೆ. ಇವು ಹಲವು ಅನುಮಾನಗಳು ಹುಟ್ಟುವಂತೆ ಮಾಡಿದ್ದು, ಸಾವು ಹೇಗೆ ಸಂಭವಿಸಿದೆ ಎಂಬುದೇ ತಿಳಿದುಬಂದಿಲ್ಲ.
ಕೊಳೆತ ಸ್ಥಿತಿಯಲ್ಲಿದ್ದ ಶವಗಳನ್ನು ವೈಜ್ಞಾನಿಕ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಶವಪರೀಕ್ಷೆ ನಡೆಸಿದ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.