ಹೈದರಾಬಾದ್: ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯ ಪಾಲಮುರು ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕ್ರೇನ್ ತಂತಿ ತುಂಡಾಗಿ ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವಘಡದಲ್ಲಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣ ಸರ್ಕಾರ ₹35,000 ಕೋಟಿ ವೆಚ್ಚದಲ್ಲಿ ಕೃಷ್ಣಾ ನದಿಗೆ ನಿರ್ಮಿಸುತ್ತಿರುವ ಪಾಲಮುರು ರಂಗಾರೆಡ್ಡಿ ಏತ ನೀರಾವರಿ ಯೋಜನೆಯ ಕಾಮಗಾರಿ ನಾಗರ ಕರ್ನೂಲ್ ಜಿಲ್ಲೆಯ ಕೊಲ್ಲಾಪುರ ಮಂಡಲದ ರೆಗುಮಾನ ಗಡ್ಡಾದಲ್ಲಿ ನಡೆಯುತ್ತಿದೆ.
ನಿರ್ಮಾಣ ಹಂತದಲ್ಲಿದ್ದ ಪ್ಯಾಕೇಜ್-1ರಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಪೂರ್ವ ಗೋದಾವರಿ ಜಿಲ್ಲೆಯ ಸಿನು (35), ಜಾರ್ಖಂಡ್ನ ಭೋಲಾನಾಥ್ (40), ಬಿಹಾರ ಮೂಲದ ಪ್ರವೀಣ್, ಕಮಲೇಶ್ ಮತ್ತು ಸೋನು ಕುಮಾರ್ ಎಂದು ಗುರುತಿಸಲಾಗಿದೆ.
‘100 ಅಡಿ ಆಳದ ಸುರಂಗದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಏಳು ಮಂದಿ ಕಾರ್ಮಿಕರು ಕೆಲಸ ಮುಗಿಸಿ ಹೊರಗೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸುರಂಗದಿಂದ ಕ್ರೇನ್ನಲ್ಲಿ 70 ಅಡಿ ಮೇಲಕ್ಕೆ ಬರುತ್ತಿದ್ದಂತೆ ತಂತಿ ತುಂಡಾಗಿದ್ದು, ಕಾರ್ಮಿಕರು ಕೆಳಗೆ ಬಿದ್ದಿದ್ದಾರೆ’ ಎಂದು ಕೊಲ್ಲಾಪುರ ಪೊಲೀಸ್ ಇನ್ಸ್ಪೆಕ್ಟರ್ ಯಾಲಾದ್ರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.