ADVERTISEMENT

ಸಂಶೋಧನೆಗಳು ಸಮಾಜ ತಲುಪಬೇಕು: ಮೋದಿ

ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ 25 ವರ್ಷಗಳ ಮುನ್ನೋಟ ಹಂಚಿಕೊಂಡ ಪ್ರಧಾನಿ

ಪಿಟಿಐ
Published 3 ಜನವರಿ 2023, 18:46 IST
Last Updated 3 ಜನವರಿ 2023, 18:46 IST
108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು  –ಪಿಟಿಐ ಚಿತ್ರ
108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು  –ಪಿಟಿಐ ಚಿತ್ರ   

ನಾಗ್ಪುರ: ವಿಜ್ಞಾನಿಗಳು, ಸಂಶೋಧಕರು ಭಾರತವನ್ನು ವಿಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬಿ
ಯಾಗಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಜ್ಞಾನಿಗಳು ತಮ್ಮ ಜ್ಞಾನದ ಮೂಲಕ ಜನರ ದೈನಂದಿನ ಜೀವನದಲ್ಲಿ ಬದಲಾವಣೆಗಳನ್ನು
ತರಲು ಶ್ರಮಿಸಬೇಕು ಎಂದು ಸೂಚಿಸಿದರು.

ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಐದು ದಿನಗಳ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಪ್ರಧಾನಿ, ವಿಜ್ಞಾನ ಕ್ಷೇತ್ರದಲ್ಲಿ ಮುಂದಿನ 25 ವರ್ಷಗಳ ಮುನ್ನೋಟದ ಕುರಿತು ವಿವರಿಸಿದರು.

‘ಕ್ವಾಂಟಮ್‌’ ತಂತ್ರಜ್ಞಾನ, ದತ್ತಾಂಶ ವಿಜ್ಞಾನ, ಹೊಸ ಲಸಿಕೆಗಳ ಅಭಿವೃದ್ಧಿಯತ್ತ ಗಮನ ಕೇಂದ್ರೀಕ
ರಿಸುವುದು, ಹೊಸ ರೋಗಗಳ ಮೇಲೆ ಕಣ್ಗಾವಲಿಡುವುದು ಹಾಗೂ ಸಂಶೋಧನೆ ಕೈಗೊಳ್ಳಲು ಯುವ ಸಮುದಾಯವನ್ನು ಪ್ರೋತ್ಸಾಹಿಸುವುದಕ್ಕೆ ಒತ್ತು ನೀಡಬೇಕು’ ಎಂದು ಪ್ರಧಾನಿ ಸೂಚಿಸಿದರು.

ADVERTISEMENT

‘ವಿಜ್ಞಾನ ಕ್ಷೇತ್ರದ ಸಾಧನೆಗಳು ಪ್ರಯೋಗಾಲಯದಿಂದ ಹೊರಬಂದು, ಸಮಾಜವನ್ನು ತಲುಪಬೇಕು. ಆಗ ಅದರ ಪರಿಣಾಮವು ಜಾಗತಿಕ ಮಟ್ಟದಿಂದ ತಳಮಟ್ಟದವರೆಗೂ ವ್ಯಾಪಿಸುತ್ತದೆ. ಸಂಶೋಧನೆಗಳು ಜರ್ನಲ್‌ಗಳಿಗೆ ಸೀಮಿತವಾಗದೆ, ಜನರ ದೈನಂದಿನ ಜೀವನದಲ್ಲಿ ಬದಲಾವಣೆ, ಸುಧಾರಣೆಗಳನ್ನು ತರುವಂತಾಗಬೇಕು’ ಎಂದು ಹೇಳಿದರು.

ಯುವ ಸಮುದಾಯವನ್ನು ವಿಜ್ಞಾನದತ್ತ ಆಕರ್ಷಿಸಲು ಪ್ರತಿಭಾನ್ವೇಷಣೆ ಮತ್ತು ಹ್ಯಾಕಥಾನ್‌ಗಳನ್ನು ನಡೆಸಬೇಕು. ಈ ಮೂಲಕ ಗುರು– ಶಿಷ್ಯ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದರು.

ಸಂಶೋಧನಾ ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಲು ಖಾಸಗಿ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಅವಕಾಶಗಳನ್ನು ಒದಗಿಸಬೇಕು ಎಂದು ಪ್ರಧಾನಿ ತಿಳಿಸಿದರು.

ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜಿತೇಂದ್ರ ಸಿಂಗ್, ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಉಪಸ್ಥಿತರಿದ್ದರು.

‘ಕ್ವಾಂಟಮ್‌’ನತ್ತ ಗಮನ: ‘ಕ್ವಾಂಟಮ್‌ ಕಂಫ್ಯೂಟಿಂಗ್‌’ ಕ್ಷೇತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂದು ಸಂಶೋಧಕರಿಗೆ ತಿಳಿಸಿದ ಅವರು, ಈ ಮೂಲಕ ವಿಶ್ವದ ನಾಯಕರಾಗಿ ಹೊರಹೊಮ್ಮಲು ಅವಕಾಶಗಳಿವೆ ಎಂದರು.

ಭಾರತವು ‘ಕ್ವಾಂಟಮ್‌’ ಕಂಪ್ಯೂಟರ್‌ಗಳು, ರಸಾಯನ ವಿಜ್ಞಾನ, ಸಂವಹನ, ಸೆನ್ಸಾರ್‌, ‘ಕ್ರಿಪ್ಟೋಗ್ರಫಿ’ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಯುವ ಸಂಶೋಧಕರು ಮತ್ತು ವಿಜ್ಞಾನಿಗಳು ‘ಕ್ವಾಂಟಮ್‌’ ಕ್ಷೇತ್ರದಲ್ಲಿ ಪರಿಣತಿ ಹೊಂದುವಂತೆ ಅವರು ತಿಳಿಸಿದರು.

ಕೃತಕ ಬುದ್ಧಿಮತ್ತೆ, ವರ್ಚುವಲ್‌ ರಿಯಾಲಿಟಿ ಸೇರಿದಂತೆ ವಿವಿಧ ವಿಷಯಗಳನ್ನು ತಮ್ಮ ಆದ್ಯತೆ
ಪಟ್ಟಿಯಲ್ಲಿ ಸೇರಿಸಿಕೊಳ್ಳೂವಂತೆ ಕರೆ ನೀಡಿದ ಪ್ರಧಾನಿ, ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳುವಂತೆ ಸೂಚಿಸಿದರು.

ವೈಜ್ಞಾನಿಕ ಸಂಶೋಧನೆ ಆರ್ಥಿಕ ಪ್ರಗತಿಗೆ ಪೂರಕವಾಗಿರಲಿ’

‘ವೈಜ್ಞಾನಿಕ ಸಂಶೋಧನೆಗಳು ಆರ್ಥಿಕ ಪ್ರಗತಿಗೆ ಪೂರಕವಾಗಿರಬೇಕು. ಇದು ಮುಂದಿನ 25 ವರ್ಷಗಳ ಅವಧಿಗೆ ಭಾರತದ ವಿಜ್ಞಾನ ಕ್ಷೇತ್ರದ ಕಾರ್ಯಸೂಚಿಯೂ ಆಗಿರಬೇಕು’ ಎಂಬ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದರು.

ಆದರೆ, ಪ್ರಧಾನಿಯ ಆಶಯಕ್ಕೆ ಹಿರಿಯ ವಿಜ್ಞಾನಿಗಳು ಪ್ರತಿಕ್ರಿಯಿಸಿದ್ದು, ‘ದೀರ್ಘ ಕಾಲೀನ ಗುರಿ ಕೇಂದ್ರಿತ ಸಂಶೋಧನೆಗೆ ಸರ್ಕಾರ ಒತ್ತು ನೀಡಬೇಕು’ ಎಂದಿದ್ದಾರೆ.

‘ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ಹೂಡಿಕೆ ಕೂಡ ದೀರ್ಘಾವಧಿ, ಮಧ್ಯಮಾವಧಿ ಹಾಗೂ ಅಲ್ಪಾವಧಿ ಗುರಿಯನ್ನು ಹೊಂದಿರಬೇಕು. ಇಂಥ ಹೂಡಿಕೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.