ADVERTISEMENT

ನಮ್ಮ ನೆಲದಲ್ಲಿ ವಿದ್ಯುತ್ ಕಂಬ ಹಾಕುವ ಮೇಘಾಲಯದ ಯತ್ನವನ್ನು ತಡೆದಿದ್ದೇವೆ: ಅಸ್ಸಾಂ

ಪಿಟಿಐ
Published 27 ಜುಲೈ 2021, 2:52 IST
Last Updated 27 ಜುಲೈ 2021, 2:52 IST
ಘರ್ಷಣೆ ವೇಳೆ ಪೊಲೀಸರತ್ತ ಕಲ್ಲುತೂರಿದ ಸ್ಥಳೀಯರು–-ಪಿಟಿಐ ಚಿತ್ರ
ಘರ್ಷಣೆ ವೇಳೆ ಪೊಲೀಸರತ್ತ ಕಲ್ಲುತೂರಿದ ಸ್ಥಳೀಯರು–-ಪಿಟಿಐ ಚಿತ್ರ   

ಗುವಾಹಟಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮತ್ತು ಮೇಘಾಲಯದ ನಡುವಣ ಸಂಘರ್ಷ ತಾಕಕ್ಕೇರಿದೆ.

ಗುವಾಹಟಿಯ ಖಾನಪರಾ ಪ್ರದೇಶದ ಅಂತರರಾಜ್ಯ ಗಡಿಯಲ್ಲಿ ತಮ್ಮ ರಾಜ್ಯಕ್ಕೆ ಸೇರಿದ ಭೂಮಿಯಲ್ಲಿ ವಿದ್ಯುತ್ ಕಂಬಗಳನ್ನು ನಿರ್ಮಿಸಲು ಮೇಘಾಲಯ ಪ್ರಯತ್ನಿಸಿತ್ತು ಎಂದು ಅಸ್ಸಾಂ ಆರೋಪಿಸಿದೆ. ಈ ಕಾರಣದಿಂದಲೇ ಸೋಮವಾರ ಉದ್ವಿಗ್ನತೆ ಹೆಚ್ಚಿತು ಎಂದು ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಘರ್ಷಣೆ ಬಗ್ಗೆ ಮಾಹಿತಿ ಪಡೆದ ಅಸ್ಸಾಂ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಅಂತರರಾಜ್ಯ ಗಡಿಯ ಸಮೀಪವಿರುವ ಖಾನಪರಾಗೆ ಧಾವಿಸಿ ಮೇಘಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನಂತರ ನೆರೆಯ ರಾಜ್ಯವು ವಿದ್ಯುತ್ ಕಂಬಗಳನ್ನು ನಿರ್ಮಿಸದಿರಲು ಒಪ್ಪಿಕೊಂಡಿತು ಎಂದು ಅಧಿಕಾರಿ ಹೇಳಿದರು.

ADVERTISEMENT

‘ಪರಿಸ್ಥಿತಿಯನ್ನು ಶಾಂತಿಯುತವಾಗಿ ನಿರ್ವಹಿಸಲಾಗಿದ್ದು, ಸದ್ಯ, ನಿಯಂತ್ರಣದಲ್ಲಿದೆ’ಎಂದು ಅಧಿಕಾರಿ ಹೇಳಿದರು. ಈ ಪ್ರದೇಶಕ್ಕೆ ಈಗಾಗಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದೇವೆ ಎಂದು ಅಸ್ಸಾಂ ಹೇಳಿದೆ. ಆದರೆ, ವಿದ್ಯುತ್ ಸಂಪರ್ಕವಿರಲಿಲ್ಲ ಎಂಬುದು ಮೇಘಾಲಯದ ವಾದವಾಗಿದೆ.

ಅಸ್ಸಾಂ ಮತ್ತು ಮೇಘಾಲಯದ ನಡುವಿನ ಗಡಿ ವಿವಾದ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಎರಡು ದಿನಗಳ ಹಿಂದೆ ಶಿಲ್ಲಾಂಗ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಸಭೆಯಲ್ಲಿಯೂ ಈ ವಿಷಯದ ಚರ್ಚೆ ನಡೆದಿತ್ತು. ಅಷ್ಟಾದರೂ, ಸೋಮವಾರ ಘರ್ಷಣೆ ನಡೆದಿದೆ. ರಾಜ್ಯದ ‘ಸಾಂವಿಧಾನಿಕ ಗಡಿ’ರಕ್ಷಣೆ ವೇಳೆ ಅಸ್ಸಾಂನ ಕನಿಷ್ಠ ಐದು ಮಂದಿ ಪೊಲೀಸರು ಮೃತಪಟ್ಟು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಮೂಲಕ, ಈಶಾನ್ಯ ಭಾರತದ ಎರಡು ರಾಜ್ಯಗಳ ನಡುವಿನ ಗಡಿ ವಿವಾದವು ರಕ್ತಸಿಕ್ತ ಸಂಘರ್ಷಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.