ನವದೆಹಲಿ: ‘ಯಾವುದೇ ಒಬ್ಬ ವ್ಯಕ್ತಿಯನ್ನು ಅವರ ಕೊಡುಗೆ ಮತ್ತು ಪ್ರತಿಭೆಯಿಂದ ಗುರುತಿಸಲಾಗುತ್ತದೆಯೇ ಹೊರತು ಧಾರ್ಮಿಕ ಗುರುತಿನಿಂದ ಅಲ್ಲ’ ಎಂದು ಪ್ರತಿಪಾದಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ, ‘ಭಾರತದ ಕಲ್ಪನೆಯಲ್ಲಿ ನಾನು ನಂಬಿಕೆ ಹೊಂದಿದ್ದೇನೆ’ ಎಂದು ಹೇಳಿದ್ದಾರೆ.
‘ಖುರೇಷಿ ಅವರು ಚುನಾವಣಾ ಆಯುಕ್ತರಾಗಿರಲಿಲ್ಲ, ಬದಲಿಗೆ ಮುಸ್ಲಿಂ ಆಯುಕ್ತರಾಗಿದ್ದರು’ ಎಂದು ಶನಿವಾರ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಖುರೇಷಿ ತಿರುಗೇಟು ನೀಡಿದ್ದಾರೆ.
‘ಕೆಲವರು ತಮ್ಮ ದ್ವೇಷಪೂರಿತ ರಾಜಕೀಯವನ್ನು ಮುನ್ನಡೆಸಲು ಧಾರ್ಮಿಕ ಗುರುತುಗಳನ್ನು ಪ್ರಮುಖವಾಗಿ ಬಳಸುತ್ತಾರೆ’ ಎಂದು ಅವರು ಕಿಡಿಕಾರಿದ್ದಾರೆ.
‘ಭಾರತವು ಯಾವಾಗಲೂ ತನ್ನ ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳ ಪರ ಇದ್ದು, ಅದಕ್ಕಾಗಿ ಹೋರಾಡುತ್ತದೆ’ ಎಂದು ಅವರು ತಿಳಿಸಿದ್ದಾರೆ.
‘ಹಂದಿಗಳ ಜತೆಗೆ ಎಂದಿಗೂ ಕುಸ್ತಿ ಆಡಬಾರದು. ಅದರಿಂದ ನೀವು ಕೊಳಕಾಗುತ್ತೀರಿ ಮತ್ತು ಅದು ಹಂದಿಗೂ ಇಷ್ಟವಾಗುತ್ತದೆ’ ಎಂದು ಲೇಖಕ ಜಾರ್ಜ್ ಬರ್ನಾರ್ಡ್ ಶಾ ಅವರು ಹಿಂದೇಯೇ ಹೇಳಿದ್ದಾರೆ. ಅದನ್ನು ನಾನು ಅರಿತಿದ್ದೇನೆ’ ಎಂದು ಖುರೇಶಿ ಅವರು ಯಾರನ್ನೂ ಉಲ್ಲೇಖಿಸದೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ನಿಶಿಕಾಂತ್ ದುಬೆ ಹೇಳಿಕೆಯನ್ನು ಖಂಡಿಸಿರುವ ಹಲವು ರಾಜಕೀಯ ನಾಯಕರು, ಖುರೇಷಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.