ಲಖನೌ:ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಅವರು ಆರ್ಎಸ್ಎಸ್ನ ಅಂಗ ಸಂಸ್ಥೆ ಸೇವಾ ಭಾರತಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಪಿತ್ರಾರ್ಜಿತ ಆಸ್ತಿ ದಾನ ಮಾಡಿದ್ದಾರೆ.
ಪಿತ್ರಾರ್ಜಿತ ಆಸ್ತಿಯ ಪೈಕಿ ₹15 ಕೋಟಿ ಮೌಲ್ಯದ ಭೂಮಿಯನ್ನು ಸಿಂಗ್ ಅವರು ಸೇವಾ ಭಾರತಿಗೆ ದಾನ ಮಾಡಿದ್ದಾರೆ. ಇದರಲ್ಲಿ ಆಜಂಗಡದ ತರ್ವಾನ್ನಲ್ಲಿರುವ ₹4 ಕೋಟಿ ಮೌಲ್ಯದ ಒಂದು ಮನೆ, ₹10 ಕೋಟಿ ಮೌಲ್ಯದ 2 ಎಕರೆ ಭೂಮಿ ಒಳಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
‘ತಂದೆಯ ಸ್ಮರಣಾರ್ಥ ಆಸ್ತಿ ದಾನ ಮಾಡಿದ್ದೇನೆ. ಸಮಾಜ ಸೇವೆ ಮಾಡುವ ಅವರ ಪ್ರಯತ್ನಗಳಿಗೆ ಕೊಡುಗೆ ನೀಡಲು ಯತ್ನಿಸಿದ್ದೇನೆ’ ಎಂದು ಸಿಂಗ್ ಹೇಳಿದ್ದಾರೆ.
ಆರ್ಎಸ್ಎಸ್ ಮೂಲಕ ಬಿಜೆಪಿ ಸೇರ್ಪಡೆಯಾಗಲು ಯತ್ನಿಸುತ್ತಿದ್ದೀರಿ ಎಂದು ಕೆಲವು ರಾಜಕೀಯ ಪಕ್ಷಗಳ ಮುಖಂಡರು ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ನಾನು ಅಂತಹ ಆರೋಪಗಳಿಗೆಲ್ಲ ಉತ್ತರಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ಮಂದಿರ ಈಗಾಗಲೇ ಅಸ್ತಿತ್ವದಲ್ಲಿದೆ. ಈಗಿರುವ ಮಂದಿರವನ್ನು ಭವ್ಯವಾಗಿಸುವುದಷ್ಟೇ ಈಗ ಚರ್ಚೆಯಲ್ಲಿರುವ ವಿಷಯ ಎಂದು ಹೇಳಿದ್ದಾರೆ.
ಆಜಂಗಡದವರಾದ ಅಮರ್ ಸಿಂಗ್ ಜಿಲ್ಲೆಯ ಅಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಆಪ್ತರೂ ಆಗಿದ್ದರು. 2010ರಲ್ಲಿ ಪಕ್ಷದಿಂದ ದೂರವಾದ ಅವರು ಪೂರ್ವಾಂಚಲದ ಬೇಡಿಕೆಗಾಗಿ ರಾಷ್ಟ್ರೀಯ ಲೋಕ ಮಂಚ್ ಸ್ಥಾಪಿಸಿದ್ದರು. 2012ರ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ ಮಂಚ್ 360 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಷ್ಟೂ ಕ್ಷೇತ್ರಗಳಲ್ಲಿ ಸೋಲನುಭವಿಸಿತ್ತು. ನಂತರ ರಾಜಕೀಯದಿಂದ ದೂರ ಸರಿದಿದ್ದರು. 2016ರಲ್ಲಿ ಮತ್ತೆ ಸಮಾಜವಾದಿ ಪಕ್ಷ ಸೇರಿದ್ದರೂ ಅವರನ್ನು ಅಖಿಲೇಶ್ ಯಾದವ್ ಪಕ್ಷದಿಂದ ಉಚ್ಚಾಟಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.