ADVERTISEMENT

ಡಾ.ಅಂಬೇಡ್ಕರ್ ಸ್ಮಾರಕಕ್ಕೆ ಶಂಕುಸ್ಥಾಪನೆ: ಚುನಾವಣಾ ಪೂರ್ವ ನಾಟಕ ಎಂದ ಮಾಯಾವತಿ

ಪಿಟಿಐ
Published 29 ಜೂನ್ 2021, 14:15 IST
Last Updated 29 ಜೂನ್ 2021, 14:15 IST
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ   

ಲಖನೌ: ಭಾರತ ರತ್ನ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿರುವುದು ಬಿಜೆಪಿ ಸರ್ಕಾರವು ತಮ್ಮ ಚುನಾವಣಾ ಆಸಕ್ತಿಯನ್ನು ಮುಂದಿಟ್ಟುಕೊಂಡು ಮಾಡಿರುವ 'ಮೋಸ ಮತ್ತು ವಂಚನೆಯ' ಕ್ರಮ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

'2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇದು 'ವಂಚನೆ', 'ಮೋಸ' ಮತ್ತು 'ನಾಟಕ' ಆಗಿರದಿದ್ದರೆ, ಈ ವೇಳೆಗಾಗಲೇ ರಾಷ್ಟ್ರಪತಿಗಳು ಕೇಂದ್ರವನ್ನು ಉದ್ಘಾಟಿಸುತ್ತಿದ್ದರು ಹೊರತು ಅದಕ್ಕೆ ಅಡಿಪಾಯ ಹಾಕುತ್ತಿರಲಿಲ್ಲ' ಎಂದು ಮಾಯಾವತಿ ಆರೋಪಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ದಲಿತರು ಮತ್ತು ಹಿಂದುಳಿದ ವರ್ಗದ ಜನರ ಹಕ್ಕುಗಳನ್ನು ತಿರಸ್ಕರಿಸುವಲ್ಲಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರಗಳಿಗಿಂತ ಯೋಗಿ ಆದಿತ್ಯನಾಥ್ ಅವರ ಸರ್ಕಾರವೇನು ಭಿನ್ನವಾಗಿಲ್ಲ ಎಂದು ಪ್ರತಿಪಾದಿಸಿದರು.

ADVERTISEMENT

'ಈಗ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗ ಬಾಬಾ ಸಾಹೇಬರ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರವೊಂದರ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಇದು ನಾಟಕವಲ್ಲದಿದ್ದರೆ, ತಾವು ಅಧಿಕಾರದಲ್ಲಿದ್ದಾಗ ಬಾಬಾ ಸಾಹೇಬರ ಕೋಟಿಗಟ್ಟಲೆ ಅನುಯಾಯಿಗಳನ್ನು ನಿರ್ಲಕ್ಷಿಸಿದ್ದರ ಅರ್ಥವೇನು?' ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

'ಪೂಜ್ಯ ಬಾಬಾ ಸಾಹೇಬರ ಹೆಸರಿನಲ್ಲಿ ಯಾವುದೇ ಕೇಂದ್ರವನ್ನು ಸ್ಥಾಪಿಸುವುದಕ್ಕೆ ಬಿಎಸ್‌ಪಿ ವಿರೋಧಿಸುವುದಿಲ್ಲ, ಆದರೆ ಚುನಾವಣಾ ಹಿತದೃಷ್ಟಿಯಿಂದ ಈಗ ಇದನ್ನೆಲ್ಲ ಮಾಡುವುದು ಸಂಪೂರ್ಣ ವಂಚನೆಯಾಗಿದೆ. ಈ ಮೊದಲು ಯುಪಿ ಸರ್ಕಾರ ಈ ಕೆಲಸವನ್ನು ಮಾಡಿದ್ದರೆ, ರಾಷ್ಟ್ರಪತಿಗಳು ಈಗ ಕೇಂದ್ರವನ್ನು ಉದ್ಘಾಟಿಸುತ್ತಿದ್ದರು ಮತ್ತು ಅಡಿಪಾಯ ಹಾಕುತ್ತಿರಲಿಲ್ಲ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.