ADVERTISEMENT

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ತರಹೇವಾರಿ ‘ಕಾರಣ’, ವಿಶ್ಲೇಷಣೆ

ಪಿಟಿಐ
Published 17 ಫೆಬ್ರುವರಿ 2025, 1:24 IST
Last Updated 17 ಫೆಬ್ರುವರಿ 2025, 1:24 IST
<div class="paragraphs"><p>ಕಾಲ್ತುಳಿತ ಘಟನೆ ಬೆನ್ನಲ್ಲೇ ನವದೆಹಲಿ ರೈಲು ನಿಲ್ದಾಣದಲ್ಲಿ ಭಾನುವಾರ ಭದ್ರತೆಯನ್ನು ಹೆಚ್ಚಿಸಲಾಗಿತ್ತು&nbsp;  </p></div>

ಕಾಲ್ತುಳಿತ ಘಟನೆ ಬೆನ್ನಲ್ಲೇ ನವದೆಹಲಿ ರೈಲು ನಿಲ್ದಾಣದಲ್ಲಿ ಭಾನುವಾರ ಭದ್ರತೆಯನ್ನು ಹೆಚ್ಚಿಸಲಾಗಿತ್ತು 

   

–ಪಿಟಿಐ ಚಿತ್ರ 

ನವದೆಹಲಿ: ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಕುರಿತಂತೆ ತರಹೇವಾರಿ ವಿಶ್ಲೇಷಣೆಗಳು, ದೂರುಗಳು ಕೇಳಿ ಬರುತ್ತಿವೆ. ರೈಲ್ವೆ ಇಲಾಖೆ, ಪೊಲೀಸರು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ನಾಯಕರು ಈ ದುರಂತ ಕುರಿತು ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ADVERTISEMENT

18 ಜನರ ಸಾವಿಗೆ ಕಾರಣವಾದ ಈ ಅವಘಡ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವ್ಯಾಪಕ ಪೋಸ್ಟ್‌ಗಳು ಹರಿದಾಡುತ್ತಿವೆ.

ಜನದಟ್ಟಣೆ ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವುದು, ಪ್ಲಾಟ್‌ಫಾರ್ಮ್‌ ಬದಲಿಸಿರುವುದು ಕಾಲ್ತುಳಿತಕ್ಕೆ ಕಾರಣ ಎಂದು ಹಲವರು ದೂರಿದ್ದಾರೆ. ಭಾರತದ ಜನಸಂಖ್ಯೆ, ಪ್ರವಾಸ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆ ಮಾಡದಿರುವುದು, ರೈಲುಗಳ ಆಗಮನ–ನಿರ್ಗಮನ ಕುರಿತ ಘೋಷಣೆಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವುದು ಅವಘಡಕ್ಕೆ ಕಾರಣ ಎಂಬ ವಾದಗಳೂ ಕೇಳಿಬರುತ್ತಿವೆ. 

ಪ್ರಯಾಗ್‌ರಾಜ್‌ಗೆ ಸಂಚರಿಸುವ ರೈಲು ನಿಲ್ಲುವ ಪ್ಲಾಟ್‌ಫಾರ್ಮ್‌ ಅನ್ನು ಹಠಾತ್ತನೇ ಬದಲಿಸಿದ್ದು ಕಾಲ್ತುಳಿತಕ್ಕೆ ಕಾರಣ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ, ಕೆಲ ರೈಲ್ವೆ ಅಧಿಕಾರಿಗಳು ಈ ಮಾತನ್ನು ತಳ್ಳಿ ಹಾಕಿದ್ದಾರೆ.

ಪ್ಲಾಟ್‌ಫಾರ್ಮ್‌ ಬದಲಿ ಮಾಡಿರುವ ಕುರಿತು ಯಾವುದೇ ಘೋಷಣೆ ಮಾಡಿಲ್ಲ ಎಂದೂ ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ.

‘ಪ್ರಯಾಗ್‌ರಾಜ್‌ ಸ್ಪೇಷಲ್‌ ರೈಲು ಸಂಚಾರ ಕುರಿತು ಮಾಡಿದ್ದ ಘೋಷಣೆಯನ್ನು ಜನರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಪ್ರಯಾಗ್‌ರಾಜ್‌ಗೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲಿನ ಪ್ಲಾಟ್‌ಫಾರ್ಮ್ ಬದಲಿಸಿರುವ ಕುರಿತ ಘೋಷಣೆ ಎಂಬುದಾಗಿ ಪ್ರಯಾಣಿಕರು ತಿಳಿದುಕೊಂಡಿದ್ದರಿಂದ ನೂಕುನುಗ್ಗಲು, ಕಾಲ್ತುಳಿತ ಉಂಟಾಯಿತು’ ಎಂಬ ವಾದವನ್ನು ಅಧಿಕಾರಿಗಳು ಮುಂದಿಟ್ಟಿದ್ಧಾರೆ.

ಆಡಳಿತಾರೂಢ ಪಕ್ಷಗಳ ಸಿದ್ಧಾಂತಗಳ ಪರ ಇರುವವರು ಹಾಗೂ ವಿರುದ್ಧವಾಗಿರುವವರು ಕೂಡ ತಮ್ಮದೇ ವಾದ ಹಾಗೂ ಸಲಹೆಗಳನ್ನು ಮುಂದಿಟ್ಟಿದ್ದಾರೆ. 

ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ರೈಲುಗಳಿಗಾಗಿ ಭಾನುವಾರ ಕಾಯುತ್ತಿದ್ದರು 

ಜನರು ನೀಡಿರುವ ಕಾರಣಗಳು/ಸಲಹೆಗಳು/ದೂರುಗಳು

  • ಪ್ರಯಾಣಕ್ಕೂ ಮುನ್ನ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸದಿವುದು ಕಡಿಮೆ ಲಗೇಜು ಒಯ್ಯದಿರುವುದು ಹಾಗೂ ಸರದಿಯಲ್ಲಿ ನಿಲ್ಲದಿರುವುದು ಅವಘಡಗಳಿಗೆ ಕಾರಣ

  • ಓಲೈಕೆ ರಾಜಕಾರಣ ನಿಲ್ಲಿಸಬೇಕು. ಸಂಸತ್‌ನಲ್ಲಿ ಕೂಡಲೇ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸಬೇಕು. ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ಕಾಲ್ತುಳಿತ ಸಂಚಾರ ಮತ್ತು ಜನರ ದಟ್ಟಣೆ ನಿರ್ವಹಣೆ ಸಾಧ್ಯವಿಲ್ಲ

  • ಗ್ರಾಮೀಣ ಪ್ರದೇಶ ಜನರು ಬಹಳ ಸುಲಭವಾಗಿ ವದಂತಿಗಳನ್ನು ನಂಬುತ್ತಾರೆ. ಇದರಿಂದ ಕಾಲ್ತುಳಿತ ಉಂಟಾಗುತ್ತದೆ. ಸರ್ಕಾರವನ್ನು ದೂರುವ ಬದಲು ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಶಿಷ್ಟಾಚಾರಗಳನ್ನು ಕಲಿಸುವ ಅಗತ್ಯ ಇದೆ.

  • ಒಂದು ಗಂಟೆಯಲ್ಲಿ ಸಾವಿರಕ್ಕೂ ಅಧಿಕ ಕಾಯ್ದಿರಿಸದ ಟಿಕೆಟ್‌ಗಳನ್ನು ನೀಡಲಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಎಚ್ಚರಿಕೆ ತೆಗೆದುಕೊಂಡಿಲ್ಲ. ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡುವ ಪ್ರಯತ್ನಗಳನ್ನೇ ಮಾಡಿಲ್ಲ

ಕಿರಿದಾದ ದಾರಿ ಮೇಲ್ಸೇತುವೆ..

ನವದೆಹಲಿ ರೈಲು ನಿಲ್ಧಾಣದಲ್ಲಿ 16ನೇ ಪ್ಲಾಟ್‌ಫಾರ್ಮ್‌ಗೆ ತೆರಳುವುದಕ್ಕಾಗಿ ನಿರ್ಮಿಸಿರುವ ಪಾದಚಾರಿ ಮೇಲ್ಸುತುವೆ 25 ಅಡಿ ಅಗಲ ಇದ್ದು ಇದನ್ನು ತಲುಪಲು 42 ಮೆಟ್ಟಿಲುಗಳಿವೆ. ಸಾವಿರಾರು ಜನರು ಈ ಮೆಟ್ಟಿಲುಗಳ ಮೂಲಕ ಸೇತುವೆ ಮೇಲೆ ನುಗ್ಗಿದ್ದರಿಂದ ವಿಪರೀತ ದಟ್ಟಣೆ ಉಂಟಾಗಿದೆ. ಇಳಿಯುವ ಧಾವಂತದಲ್ಲಿದ್ದವರು ಮೆಟ್ಟಿಲುಗಳನ್ನು ಏರಲು ಮುಂದಾದವರಿಗೆ ಅಡ್ಡಿಯಾಗಿದ್ದಾರೆ. ಇದರಿಂದ ನೂಕುನುಗ್ಗಲು ಉಂಟಾಗಿದೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

‘ಭಾರಿ ಸಂಖ್ಯೆಯಲ್ಲಿ ಜನರು ಇದ್ದ ಗುಂಪಿನ ಒತ್ತಡವನ್ನು ಸಹಿಸಲು ಸಾಧ್ಯವಿರಲಿಲ್ಲ. ಯಾವ ಕಡೆಯೂ ಚಲಿಸಲಾಗದೇ ಜನರು ಸಿಲುಕಿಕೊಂಡರು. ಕೆಲವರು ನಿಯಂತ್ರಣ ಕಳೆದುಕೊಂಡು ಬಿದ್ದರು ಹೀಗೆ ಬಿದ್ದವರನ್ನು ಗುಂಪಿನಲ್ಲಿದ್ದವರು ಎಳೆದುಕೊಂಡೇ ಹೋದರು’ ಎಂದು ಪ್ರತ್ಯಕ್ಷದರ್ಶಿ ಗ್ಯಾನೇಂದ್ರ ಸಿಂಗ್‌ ಹೇಳಿದರು. ಗುಂಪಿನಲ್ಲಿ ಹಿಂದೆ ಇದ್ದವರು ನೂಕುತ್ತಿದ್ದರಿಂದ ವಿಶೇಷವಾಗಿ ಮಕ್ಕಳು ಹಾಗೂ ಮಹಿಳೆಯರು ಹೆಚ್ಚು ಸಂಕಷ್ಟ ಅನುಭವಿಸಿದರು. ‘ನನ್ನ ಮೇಲೆ ಜನರು ಬೀಳುತ್ತಲೇ ಇದ್ದುದರಿಂದ ನನಗೆ ಬಿದ್ದ ಜಾಗದಿಂದ ಕದಲಲು ಆಗಲೇ ಇಲ್ಲ’ ಎಂದು ಈ ಕಾಲ್ತುಳಿತದಲ್ಲಿ ಬದುಕುಳಿದ ವ್ಯಕ್ತಿಯೊಬ್ಬರು ಆ ಭೀಕರ ಕ್ಷಣಗಳನ್ನು ನೆನೆದು ಕಂಪಿಸುತ್ತಲೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.