ನವದೆಹಲಿ : ಹಣದುಬ್ಬರ ಹಾಗೂ ತೈಲ ಬೆಲೆ ಏರಿಕೆ ವಿರುದ್ಧ ಜುಲೈ 7ರಿಂದ 17ರ ವರೆಗೆ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ಕಾಂಗ್ರೆಸ್ ಗುರುವಾರ ತೀರ್ಮಾನಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದ ಪಕ್ಷದ ವಿವಿಧ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳ ಹಾಗೂ ಉಸ್ತುವಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
‘ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ, ಖಾದ್ಯ ತೈಲ, ಆಹಾರ ಧಾನ್ಯಗಳ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇ 2ರಿಂದ ಸರ್ಕಾರವು ತೈಲ ಬೆಲೆಯನ್ನು 29 ಬಾರಿ ಹೆಚ್ಚಿಸಿದೆ. 150ಕ್ಕೂ ಅಧಿಕ ನಗರಗಳಲ್ಲಿ ಪೆಟ್ರೋಲ್ ದರವು ನೂರರ ಗಡಿ ದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ಗೆ ವಿಧಿಸಿರುವ ಅಬಕಾರಿ ಸುಂಕದಿಂದ ಬಿಜೆಪಿ ನೇತೃತ್ವದ ಸರ್ಕಾರವು ಕಳೆದ 7 ವರ್ಷಗಳಲ್ಲಿ ₹22ಲಕ್ಷ ಕೋಟಿ ಗಳಿಸಿದೆ ಎಂದೂ ಅವರು ಹೇಳಿದರು.
ಖಾದ್ಯ ತೈಲದ ಬೆಲೆ ಆರು ತಿಂಗಳಲ್ಲಿ ದ್ವಿಗುಣಗೊಂಡಿದೆ. ಕೋವಿಡ್ ಪರಿಣಾಮ ನಿರುದ್ಯೋಗ, ಸಂಬಳ ಕಡಿತದಿಂದಾಗಿ ಸಂಕಷ್ಟ ಕ್ಕೀಡಾಗಿರುವ ಜನರಿಗೆ ಬೆಲೆ ಏರಿಕೆಯು ಇನ್ನಷ್ಟು ಹೊರೆಯಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ವತಿಯಿಂದ ಬ್ಲಾಕ್, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.