
ಬಂಧನ (ಸಾಂದರ್ಭಿಕ ಚಿತ್ರ)
ನವದೆಹಲಿ: ರಾಜಸ್ಥಾನ ಹಾಗೂ ಇತರ ರಾಜ್ಯಗಳಲ್ಲಿ ಪೆಟ್ರೊಲಿಯಂ ಪೈಪ್ಲೈನ್ಗಳಿಂದ ಇಂಧನ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಇಬ್ಬರನ್ನು ಪೂರ್ವ ದೆಹಲಿಯ ವಿಕಾಸಪುರಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
ತಲೆಗೆ ₹ 25 ಸಾವಿರ ಬಹುಮಾನ ಘೋಷಣೆಯಾಗಿದ್ದ, ಹರಿಯಾಣ ಹಾಗೂ ಪಂಜಾಬ್ನಲ್ಲಿ ಹಲವು ಪ್ರಕರಣಗಳಲ್ಲಿ ಅರೋಪಿಗಳಾದ ಸ್ವರ್ಣ್ ಸಿಂಗ್ (55) ಹಾಗೂ ಆತನ ಭಾವ ಧರ್ಮೇಂದ್ರ ಅಲಿಯಾಸ್ ರಿಂಕು (50) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಹರ್ಷ್ ಇಂದೊರಾ ಹೇಳಿದ್ದಾರೆ.
1992ರಲ್ಲಿ ದೆಹಲಿ ಏರ್ಪೋರ್ಟ್ನಲ್ಲಿ ಕಳ್ಳತನ ಪ್ರಕರಣ ಸೇರಿ ಸ್ವರ್ಣ್ ಸಿಂಗ್ 19 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಪೆಟ್ರೊಲಿಯಂ ಭೂಗತ ಪೈಪ್ಲೈನ್ ಸಮೀಪದ ಮನೆಯನ್ನು ಬಾಡಿಗೆ ಪಡೆದಿದ್ದ. ಅಲ್ಲಿ ಗುಂಡಿ ಅಗೆದು ಸುಧಾರಿತ ವ್ಯವಸ್ಥೆ ಮೂಲಕ ಇಂಧನ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅದಕ್ಕೂ ಮುನ್ನ ಇಂಧನ ಸಾಗಣೆ ಟ್ಯಾಂಕರ್ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸ್ವರ್ಣ್ ಸಿಂಗ್, ಬಳಿಕ ಜೈಪುರ, ಗುರುಗ್ರಾಮ, ಬತಿಂಡಾ, ಕುರುಕ್ಷೇತ್ರ ಹಾಗೂ ದೆಹಲಿಯ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದ.
ರಿಂಕು ಕೂಡ ವೃತ್ತಿಯಲ್ಲಿ ಚಾಲಕನಾಗಿದ್ದು, ಸ್ವರ್ಣ್ ಸಿಂಗ್ನ ಕೃತ್ಯಗಳಿಗೆ ನೆರವಾಗುತ್ತಿದ್ದ. ಇಂಧನ ಕಳ್ಳತನ ಮಾಡುವುದು, ಅವುಗಳನ್ನು ಸಾಗಿಸುವ ಹಾಗೂ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಇವರಿಬ್ಬರ ಚಲನವಲನಗಳ ಮಾಹಿತಿ ಆಧರಿಸಿ ಡಿಸೆಂಬರ್ 3ರಂದು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಚ್ಪಿಸಿಎಲ್ ಹಾಗೂ ಎಂಡಿಪಿಎಲ್ ಪೈಪ್ಲೈನ್ಗೆ ಕನ್ನ ಹಾಕಿ ಡೀಸೆಲ್ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಈ ವರ್ಷ ಅವರ ಮೇಲೆ ದೂರು ದಾಖಲಾಗಿತ್ತು. ಇದಾದ ಬಳಿಕ ಅವರು ತಲೆ ಮರೆಸಿಕೊಂಡಿದ್ದರು. ಕಳ್ಳತನ ಮಾಡಿದ ಇಂಧನವನ್ನು ವಾಣಿಜ್ಯ ವಾಹನಗಳ ಚಾಲಕರಿಗೆ ಮಾರುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.