ADVERTISEMENT

ಭದ್ರತೆಗೆ ಗಾಂಧಿ ಒಪ್ಪಿದ್ದರೆ ಹತ್ಯೆ ತಪ್ಪಿಸಬಹುದಿತ್ತು: ಕಲ್ಯಾಣಮ್‌

ಗಾಂಧಿ ಕಾರ್ಯದರ್ಶಿಯಾಗಿದ್ದ ಕಲ್ಯಾಣಮ್ ಮೆಲುಕು

ಪಿಟಿಐ
Published 30 ಜನವರಿ 2019, 2:46 IST
Last Updated 30 ಜನವರಿ 2019, 2:46 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ಚೆನ್ನೈ: ‘ಮಹಾತ್ಮಾ ಗಾಂಧೀಜಿಯವರು ತಮಗೆ ಭದ್ರತೆ ಒದಗಿಸಿದರೆ ದೆಹಲಿ ತೊರೆಯುವುದಾಗಿ ಅಧಿಕಾರಿಗಳನ್ನು ಹೆದರಿಸಿದ್ದರು. ಸರ್ಕಾರದ ಭದ್ರತೆ ಬಳಸಲು ಅವರು ನಿರಾಕರಿಸುತ್ತಿದ್ದರು’ ಎಂದು ಗಾಂಧೀಜಿ ಅವರ ಕಾರ್ಯದರ್ಶಿಯಾಗಿದ್ದ 96 ವರ್ಷದ ಕಲ್ಯಾಣಮ್ ಹೇಳಿದ್ದಾರೆ.

1948ರಜನವರಿ 30ರಂದು ಗಾಂಧೀಜಿಯವರ ಹತ್ಯೆಯಾಗಿದ್ದು, ಆ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾಂಧೀಜಿಯ ಒಡನಾಡಿಯಾಗಿದ್ದ ಕಲ್ಯಾಣಮ್‌ ಅವರು ಹಳೆಯ ನೆನಪುಗಳನ್ನು ಪಿಟಿಐ ಸುದ್ದಿಸಂಸ್ಥೆ ಜತೆಗೆ ಹಂಚಿಕೊಂಡಿದ್ದಾರೆ.

ಗಾಂಧೀಜಿ ಹತ್ಯೆಗೂ ಕೆಲ ವಾರಗಳ ಹಿಂದೆ ಅವರ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ಸರ್ಕಾರ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದರೆ, ಭದ್ರತೆ ಬೇಡವೆಂದು ಗಾಂಧೀಜಿ ಹಠ ಹಿಡಿದಿದ್ದರು ಎಂದು ಕಲ್ಯಾಣಮ್ ಹೇಳಿದ್ದಾರೆ.

ADVERTISEMENT

‘ಭದ್ರತೆ ಮೇಲೆ ನನಗೆ ನಂಬಿಕೆಯಿಲ್ಲ. ನನ್ನ ಜೀವಕ್ಕೆ ಯಾವುದೇ ರಕ್ಷಣೆ, ಭದ್ರತೆ ಬೇಕಾಗಿಲ್ಲ. ನನಗೆ ಭದ್ರತೆ ನೀಡಲು ಮುಂದಾದರೆ ನಾನು ದೆಹಲಿಯನ್ನು ಬಿಟ್ಟುಬೇರೆಡೆ ಹೋಗುತ್ತೇನೆ’ ಎಂಬುದಾಗಿ ಗಾಂಧೀಜಿ ಹೇಳಿದ್ದರು. ಒಂದು ವೇಳೆ ಗಾಂಧೀಜಿ ಹಠ ಹಿಡಿಯದೆ, ಭದ್ರತೆ ಪಡೆಯಲು ಒಪ್ಪಿಕೊಂಡಿದ್ದರೆ ಅವರ ಹತ್ಯೆಯನ್ನುತಡೆಯಬಹುದಿತ್ತು ಎಂದು ಅವರು ಹೇಳಿದ್ದಾರೆ.

1943ರಲ್ಲಿ ಗಾಂಧೀಜಿಯವರಿಗೆ ಕಾರ್ಯದರ್ಶಿಯಾಗಿ ಸೇವೆಗೆ ಸೇರಿದ್ದ ಕಲ್ಯಾಣಮ್, ಗಾಂಧಿ ಹತ್ಯೆಯಾಗುವವರೆಗೂ ಅಂದರೆ1948ರವರೆಗೂ ಅವರ ಜತೆಯೇ ಇದ್ದರಂತೆ.

ತೃತೀಯ ದರ್ಜೆ ಟಿಕೆಟ್‌ನಲ್ಲಿ ಪ್ರಯಾಣ

ಗಾಂಧೀಜಿ ಒಮ್ಮೆ ರೈಲು ಪ್ರಯಾಣಕ್ಕೆ ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಮುಂದಾದಾಗ, ಸ್ಟೇಷನ್ ಮಾಸ್ಟರ್ ‘ನೀವು ದೇಶದ ಮಹಾನ್ ನಾಯಕ. ನಿಮಗೇಕೆ ಟಿಕೆಟ್’ ಎಂದು ಕೇಳಿದ್ದರು. ಅದಕ್ಕೆ ಗಾಂಧೀಜಿ ಅವರಿಗೆ ಸರಿಯಾಗಿಯೇ ಬೈದಿದ್ದರು.

ಗಣ್ಯ ವ್ಯಕ್ತಿಗಳಿಗೆ ರೈಲಿನಲ್ಲಿ ಪ್ರತ್ಯೇಕ ಸುಖಾಸೀನ ಬೋಗಿಯಿದ್ದರೂ ಸಹ ಅದರಲ್ಲಿ ಪ್ರಯಾಣಿಸದೆ, ತೃತೀಯ ದರ್ಜೆಯ ಟಿಕೆಟ್ ಪಡೆದು ಗಾಂಧೀಜಿ ಪ್ರಯಾಣ ಕೈಗೊಳ್ಳುತ್ತಿದ್ದರು ಎಂದು ಕಲ್ಯಾಣಮ್‌ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.