ಸಾಂಗ್ಲಿ: ಮಸೀದಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಕಳೆದ ನಾಲ್ಕು ದಶಕಗಳಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗೋಟ್ಖಿಂಡಿ ಗ್ರಾಮ ವಿಶಿಷ್ಟವಾಗಿ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಬೇರೆಡೆ ಉಂಟಾಗುವ ಧಾರ್ಮಿಕ ಉದ್ವಿಗ್ನತೆಗಳು ಎಂದಿಗೂ ಗ್ರಾಮದ ನಿವಾಸಿಗಳ ಮೇಲೆ ಪರಿಣಾಮ ಬೀರಿಲ್ಲ.
ಗ್ರಾಮದ ಜನಸಂಖ್ಯೆ 15,000ರಷ್ಟು ಇದ್ದು, ಇದರಲ್ಲಿ 100 ಕುಟುಂಬಗಳು ಮುಸ್ಲಿಂ ಸಮುದಾಯಕ್ಕೆ ಸೇರಿವೆ ಎಂದು ಸ್ಥಳೀಯ ಗಣೇಶ ಮಂಡಲದ ಸಂಸ್ಥಾಪಕ ಅಶೋಕ್ ಪಾಟೀಲ್ ತಿಳಿಸಿದ್ದಾರೆ. ಮಂಡಲದ ಸದಸ್ಯರಾಗಿ ಮುಸ್ಲಿಮರು ಕೂಡ ಇದ್ದು, ಅವರು ‘ಪ್ರಸಾದ’ ತಯಾರಿಕೆಯಲ್ಲಿ, ಪ್ರಾರ್ಥನೆಗಳಲ್ಲಿ ಮತ್ತು ಹಬ್ಬದ ವ್ಯವಸ್ಥೆಗಳಲ್ಲಿ ಸಹಾಯ ಮಾಡುತ್ತಾರೆ ಎಂದು ಅವರು ತಿಳಿಸಿದರು.
1980ರ ವೇಳೆ ಗ್ರಾಮದಲ್ಲಿ ಭಾರಿ ಮಳೆಯಾದ ಕಾರಣ ಗಣೇಶನ ಮೂರ್ತಿಯನ್ನು ಮಸೀದಿಯೊಳಗೆ ಸ್ಥಳಾಂತರಿಸಲು ಹಿಂದೂ–ಮುಸ್ಲಿಂ ಸಮುದಾಯದ ಸದಸ್ಯರು ನಿರ್ಧರಿಸಿದ್ದರು.
‘ಅಂದಿನಿಂದ ಈ ಪದ್ದತಿ ಶಾಂತಿಯುತವಾಗಿ ನಡೆಯುತ್ತಿದ್ದು, ಮುಸ್ಲಿಮರು ಕೂಡ ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಗ್ರಾಮದ ಜುಂಜಾರ್ ಚೌಕ್ನಲ್ಲಿರುವ ಹೊಸ ಗಣೇಶ ತರುಣ ಮಂಡಲವನ್ನು 1980ರಲ್ಲಿ ಸ್ಥಾಪಿಸಲಾಯಿತು’ ಎಂದು ಪಾಟೀಲ್ ಹೇಳಿದರು.
‘ಒಮ್ಮೆ ಬಕ್ರೀದ್ ಮತ್ತು ಗಣೇಶ ಹಬ್ಬ ಒಟ್ಟಿಗೆ ಬಂದಿತ್ತು. ಈ ವೇಳೆ ಮುಸ್ಲಿಮರು ನಮಾಜ್ ಮಾತ್ರ ಮಾಡಿ, ‘ಕುರ್ಬಾನಿ’ ಅರ್ಪಿಸದೆ ಹಬ್ಬ ಮುಗಿಸಿದ್ದರು. ಹಿಂದೂಗಳ ಹಬ್ಬಕ್ಕಾಗಿ ಅವರು ಮಾಂಸ ತ್ಯಜಿಸಿದ್ದರು. ಇಡೀ ದೇಶ ಇಲ್ಲಿನ ಸಾಮಾಜಿಕ ಮತ್ತು ಧಾರ್ಮಿಕ ಸೌಹಾರ್ದವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.