ಮುಂಬೈ: ದೇಶದ ಸಿರಿವಂತ, ಉದ್ಯಮಿ ಮುಕೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವಡಾ ಪ್ರಕಟಿಸಿಕೊಂಡಿರುವ ವಿಡಿಯೊದಲ್ಲಿ ಮುಕೇಶ್ ಅಂಬಾನಿ ಅವರನ್ನು ಕಾಣಬಹುದಾಗಿದೆ.
'ದಕ್ಷಿಣ ಬಾಂಬೆ ಕ್ಷೇತ್ರವನ್ನು 10 ವರ್ಷಗಳು ಪ್ರತಿನಿಧಿಸಿರುವ ಮಿಲಿಂದ್ ಅವರು ಇಲ್ಲಿನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರದ ಕುರಿತು ಆಳವಾದ ತಿಳಿವಳಿಕೆ ಹೊಂದಿದ್ದಾರೆ’ ಎಂದು ಮುಕೇಶ್ ಅಂಬಾನಿ ಹೇಳಿರುವುದುವಿಡಿಯೊದಲ್ಲಿ ದಾಖಲಾಗಿದೆ. ಮಿಲಿಂದ್ ಟ್ವಿಟರ್ ಖಾತೆಯಲ್ಲಿ ವಿಡಿಯೊ ಪ್ರಕಟಿಸಿಕೊಂಡಿದ್ದಾರೆ.
ಮಿಲಿಂದ್ ಈ ಕ್ಷೇತ್ರದಲ್ಲಿ ಉದ್ಯಮ ಮತ್ತು ಉದ್ಯೋಗ ಎರಡನ್ನೂ ತರಬಲ್ಲ ಅಭ್ಯರ್ಥಿಯಾಗಿದ್ದಾರೆ. ಇದರಿಂದಾಗಿ ಯುವ ಜನತೆಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದಿದ್ದಾರೆ.
'ಮುಂಬೈನ ಸಂಪರ್ಕಕೊಂಡಿ’ ಎಂದು ಕೋಟಕ್ ಮಹೀಂದ್ರಾ ಸಮೂಹ ಸಂಸ್ಥೆಗಳ ಉದಯ್ ಕೋಟಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಣ್ಣ ವ್ಯಾಪಾರಿಗಳಿಂದ ದೊಡ್ಡ ಉದ್ಯಮಿಗಳ ವರೆಗೆ ಅನೇಕರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮಾತನಾಡಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.