ADVERTISEMENT

ದೆಹಲಿ | ವಾಯುವಿಹಾರದಲ್ಲಿದ್ದ ಸಂಸದೆಯ ಸರ ದೋಚಿದ ಕಳ್ಳ: ಕೈ ನಾಯಕಿ ಸುಧಾ ಆಘಾತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2025, 7:04 IST
Last Updated 4 ಆಗಸ್ಟ್ 2025, 7:04 IST
<div class="paragraphs"><p>ಸಂಸದೆ ಸುಧಾ ರಾಮಕೃಷ್ಣನ್</p></div>

ಸಂಸದೆ ಸುಧಾ ರಾಮಕೃಷ್ಣನ್

   

(ಚಿತ್ರ –X /@AdvtSudha)

ನವದೆಹಲಿ: ದೆಹಲಿಯ ಚಾಣಕ್ಯಪುರಿಯಲ್ಲಿ, ಮುಂಜಾನೆ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ಕಳ್ಳ ನನ್ನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದೆ ಸುಧಾ ರಾಮಕೃಷ್ಣನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ.

ತಮಿಳುನಾಡಿನ ಮೈಲಾಡುತುರೈನ ಸಂಸದೆ ಸುಧಾ ಅವರು, ಡಿಎಂಕೆಯ ಶಾಸಕಿ ರಾಜತಿ ಅವರೊಂದಿಗೆ ಚಾಣಕ್ಯಪುರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಬಗ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಭಾನುವಾರ ಬೆಳಿಗ್ಗೆ 6.15–6.20ರ ಸುಮಾರಿಗೆ, ನಾವು ಪೋಲೆಂಡ್ ರಾಯಭಾರ ಕಚೇರಿಯ ಗೇಟ್ -3 ಮತ್ತು 4ರ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಎದುರಿನಿಂದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿ ತನ್ನ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರವನ್ನು ಕಿತ್ತುಕೊಳ್ಳುವಾಗ ನನ್ನ ಕುತ್ತಿಗೆಗೆ ಗಾಯಗಳಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಯಭಾರ ಕಚೇರಿಗಳಿರುವ ಹಾಗೂ ಹೆಚ್ಚಿನ ಭದ್ರತೆಯನ್ನು ಹೊಂದಿರುವ ಚಾಣಕ್ಯಪುರಿಯಂತಹ ಪ್ರದೇಶದಲ್ಲಿ ಸಂಸತ್ ಸದಸ್ಯೆಯಾಗಿರುವ ನನ್ನ ಮೇಲೆ ನಡೆದ ಈ ನಿರ್ಲಜ್ಜ ದಾಳಿ ಅತ್ಯಂತ ಆಘಾತಕಾರಿಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ,ಇಂತಹ ಪ್ರದೇಶದಲ್ಲಿ ಮಹಿಳೆ ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗದಿದ್ದರೆ, ನಾವು ಬೇರೆಲ್ಲಿ ಸುರಕ್ಷಿತವಾಗಿರಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನ ಕುತ್ತಿಗೆಗೆ ಗಾಯವಾಗಿದೆ. 4 ಪವನ್‌ಗಳಿಗಿಂತ ಹೆಚ್ಚು ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದೇನೆ. ಅಲ್ಲದೇ ಇಂತಹ ದುಷ್ಕೃತ್ಯದಿಂದ ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ದಯವಿಟ್ಟು ನನ್ನ ಚಿನ್ನದ ಸರವನ್ನು ಹಿಂದಿರುಗಿಸಿ, ನನಗೆ ನ್ಯಾಯವನ್ನು ಒದಗಿಸಿ ಎಂದೂ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಯನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.