ADVERTISEMENT

ಕೋವಿಡ್‌: ಭಾರತಕ್ಕೆ ಗೂಗಲ್‌ನ ಸುಂದರ್, ಮೈಕ್ರೊಸಾಫ್ಟ್‌ನ ಸತ್ಯ ನೆರವಿನ ಭರವಸೆ

ಏಜೆನ್ಸೀಸ್
Published 26 ಏಪ್ರಿಲ್ 2021, 8:09 IST
Last Updated 26 ಏಪ್ರಿಲ್ 2021, 8:09 IST
   

ನವದೆಹಲಿ: ಕೊರೊನಾ ವೈರಸ್‌ ಸೋಂಕು ದೇಶದಲ್ಲಿ ವ್ಯಾಪಿಸುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಪೂರಕ ಸೌಲಭ್ಯಗಳು ಸಿಗದೆ ಹಲವು ಮಂದಿ ಸಾವಿಗೀಡಾಗುತ್ತಿದ್ದಾರೆ. ಇಂಥ ಕಠಿಣ ಹೋರಾಟದಲ್ಲಿ ಭಾರತಕ್ಕೆ ಅಗತ್ಯವಿರುವ ನೆರವು ನೀಡುವುದಾಗಿ ಗೂಗಲ್‌ ಸಿಇಒ ಸುಂದರ್‌ ಪಿಚೈ ಮತ್ತು ಮೈಕ್ರೊಸಾಫ್ಟ್‌ನ ಸತ್ಯ ನಾದೆಲ್ಲ ಭರವಸೆ ನೀಡಿದ್ದಾರೆ.

ಗೂಗಲ್‌ ಕಂಪನಿ ಮತ್ತು ಗೂಗಲರ್‌ಗಳು ಯುನಿಸೆಫ್‌ ಹಾಗೂ ಗೀವ್‌ ಇಂಡಿಯಾ ಮೂಲಕ ಭಾರತಕ್ಕೆ ₹135 ಕೋಟಿ ನೆರವು ನೀಡುತ್ತಿರುವುದಾಗಿ ಸುಂದರ್‌ ಪಿಚೈ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ ವೈದ್ಯಕೀಯ ವಸ್ತುಗಳ ಪೂರೈಕೆ, ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಸಹಾಯ ಹಾಗೂ ಮಾರಣಾಂತಿಕ ವೈರಸ್‌ ಕುರಿತಾದ ಮಾಹಿತಿಯನ್ನು ಹಂಚಲು ಧನ ಸಹಾಯ ವಿನಿಯೋಗವಾಗಲಿದೆ.

'ಭಾರತದಲ್ಲಿ ಕೋವಿಡ್‌ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವುದನ್ನು ಕಂಡು ಮೈ ನಡುಗುತ್ತಿದೆ,' ಎಂದು ಪಿಚೈ ಪ್ರಕಟಿಸಿದ್ದಾರೆ.

ADVERTISEMENT

ಪ್ರಸ್ತುತ ಭಾರತದಲ್ಲಿನ ಕೋವಿಡ್‌ ಪರಿಸ್ಥಿತಿಯ ಬಗ್ಗೆ ತಿಳಿದು ಎದೆ ಒಡೆದಂತಾಗಿದೆ ಎಂದು ಸತ್ಯ ನಾದೆಲ್ಲ ಟ್ವೀಟಿಸಿದ್ದಾರೆ.

'ಅಮೆರಿಕ ಸರ್ಕಾರವು ಸಹಾಯಹಸ್ತ ಚಾಚಿರುವುದಕ್ಕೆ ಆಭಾರಿಯಾಗಿದ್ದೇನೆ. ಮೈಕ್ರೊಸಾಫ್ಟ್‌ ತನ್ನ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳ ಮೂಲಕ ಪರಿಹಾರ ಕಾರ್ಯಗಳಿಗೆ ನೆರವಾಗಲಿದೆ, ಅತ್ಯಾವಶ್ಯವಾಗಿರುವ ಆಕ್ಸಿಜನ್‌ ಕಾನ್ಸಂಟ್ರೇಶನ್‌ ಸಾಧನಗಳನ್ನು ಖರೀದಿಸಲು ಸಹಕಾರ ನೀಡಲಿದೆ' ಎಂದಿದ್ದಾರೆ.

ಕೊರೊನಾ ಎರಡನೇ ಅಲೆಯು ಅತ್ಯಂತ ತೀವ್ರವಾಗಿದ್ದು, ಅಮೆರಿಕ ಮತ್ತು ಬ್ರಿಟನ್‌ ಸೇರಿದಂತೆ ಹಲವು ದೇಶಗಳು ಭಾರತಕ್ಕೆ ಸಹಕಾರ ನೀಡುವ ಭರವಸೆ ನೀಡಿವೆ. ವೈದ್ಯಕೀಯ ತುರ್ತು ವಸ್ತುಗಳನ್ನು ಶೀಘ್ರವೇ ರವಾನಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.

ಸೋಮವಾರ 24 ಗಂಟೆಗಳ ಅಂತರದಲ್ಲಿ ದೇಶದಾದ್ಯಂತ 3,52,991 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 2,812 ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.