ಚಂಡೀಗಡ: ಶವಗಳ ರಾಶಿಯನ್ನು ನೋಡಲು ಆಗದಿರುವ ಕಾರಣ ಸರ್ಕಾರವು ಕೋವಿಡ್-19- ಸಾವಿನ ಸಂಖ್ಯೆ ಹೆಚ್ಚಾಗುವುದನ್ನು ತಪ್ಪಿಸಲು ಮಾರ್ಗಸೂಚಿಗಳನ್ನು ಮತ್ತಷ್ಟು ಕಠಿಣವಾಗಿ ಜಾರಿಗೊಳಿಸಲಿದೆ. ಇದರಿಂದ ಜನರಿಗೆ ತೊಂದರೆಯಾಗಬಹುದು ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಕೋವಿಡ್-19 ನಿಯಂತ್ರಿಸಲು ಎರಡು ದಾರಿಗಳಿವೆ. ʼಒಂದು ಲಾಕ್ಡೌನ್. ಜೀವನ ಮುಂದೆ ಸಾಗುವುದನ್ನು ನಾವು ಬಯಸುತ್ತೇವೆ ಹಾಗಾಗಿ ಅದು ಸಾಧ್ಯವಿಲ್ಲ. ಆದರೆ, ಅದೇ ವೇಳೆ ಜನರೂ ಸುರಕ್ಷಿತರಾಗಿರಬೇಕಾಗಿದೆ.ಸೋಂಕು ಹರಡುವಿಕೆಯನ್ನು ತಡೆಯುವ ಇನ್ನೊಂದು ಮಾರ್ಗವೆಂದರೆ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿದೆʼಎಂದಿದ್ದಾರೆ.
ಮುಂದುವರಿದು, ʼಜನರಿಗೆ ತೊಂದರೆಯಾದರೂ ಸರಿ, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ನಾವು ಅವರ ಆಕ್ರೋ಼ಶವನ್ನು ಎದುರಿಸಬಲ್ಲೆವು. ಆದರೆ, ಶವಗಳ ರಾಶಿಯನ್ನು ನೊಡಲಾಗದುʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೇರೆದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗಿದ್ದು, ಸಾವಿನ ಪ್ರಮಾಣ ಕಡಿಮೆ ಇದೆ ಎಂದೂ ವಿಜ್ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಹರಿಯಾಣದಲ್ಲಿ27,421 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ3,316ಕ್ಕೆ ಏರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.