ನವದೆಹಲಿ: ಪ್ರವಾಹ, ಭೂಕುಸಿತ, ಚಂಡಮಾರುತ, ಬರದಿಂದ ತತ್ತರಿಸಿದ್ದ ಎಂಟು ರಾಜ್ಯಗಳಿಗೆ ನೀಡಬೇಕಿದ್ದ ಹೆಚ್ಚುವರಿ ಪರಿಹಾರವನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ. ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳಿಗೆ ₹5,751.27 ಕೋಟಿ ವಿಪ್ಪತ್ತು ಪರಿಹಾರವನ್ನು ಕೇಂದ್ರ ಘೋಷಿಸಿದೆ.
ಈ ಪರಿಹಾರದಲ್ಲಿ ಕರ್ನಾಟಕಕ್ಕೆ ಸಿಕ್ಕಿರುವುದು ಕೇವಲ ₹11.48 ಕೋಟಿಗಳಷ್ಟೇ.
ಗೃಹ ಮಂತ್ರಿ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಇಂದು ಸಭೆ ನಡೆಸಿ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತು. ಮಹಾರಾಷ್ಟ್ರಕ್ಕೆ ₹1,758.18 ಕೋಟಿ, ರಾಜಸ್ಥಾನಕ್ಕೆ ₹1090.06ಕೋಟಿ ನೀಡಲಾಗಿದ್ದರೆ, ಕರ್ನಾಟಕಕ್ಕೆ ಪಶುಸಂಗೋಪನೆ ವಲಯದ ಅಡಿಯಲ್ಲಿ 2018–19ರ ಆರ್ಥಿಕ ವರ್ಷದ ಬರ ಪರಿಹಾರವಾಗಿ ₹11.48 ಕೋಟಿ ಬಿಡುಗಡೆ ಮಾಡಲಾಗಿದೆ.
ಇದೇ ವೇಳೆ, ಬಿಹಾರಕ್ಕೆ ₹953.17 ಕೋಟಿ, ಕೇರಳಕ್ಕೆ ₹460.77 ಕೋಟಿ, ನಾಗಾಲ್ಯಾಂಡ್ಗೆ ₹177.37 ಕೋಟಿ, ಒಡಿಶಾಕ್ಕೆ ₹179.64 ಕೋಟಿ, ಪಶ್ಚಿಮ ಬಂಗಾಳಕ್ಕೆ ₹1,090.68 ಕೋಟಿ ಹೆಚ್ಚುವರಿ ಪರಿಹಾರ ನೀಡಲಾಗಿದೆ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಪರಿಹಾರ ಘೋಷಣೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.