ಅಖಿಲೇಶ್ ಯಾದವ್
(ಪಿಟಿಐ ಚಿತ್ರ)
ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಸಂಗಮದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟವರ ನಿಖರ ಸಂಖ್ಯೆಯನ್ನು ಕೇಂದ್ರ ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಕುಂಭಮೇಳದ ವ್ಯವಸ್ಥೆಯಲ್ಲಿನ ದುರಾಡಳಿತವನ್ನು ಮುಚ್ಚಿಹಾಕಲು ಪ್ರಯತ್ನಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಖಿಲೇಶ್ ಆಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, 'ಸರ್ಕಾರ ಡಿಜಿಟಲ್ ಕುಂಭವನ್ನು ಆಯೋಜಿಸುವುದಾಗಿ ಹೇಳಿಕೊಂಡಿದೆ. ಆದರೆ ಮೃತರ ಸಂಖ್ಯೆಯನ್ನು ಮರೆಮಾಚುತ್ತಿದೆ' ಎಂದು ಆರೋಪಿಸಿದ್ದಾರೆ.
'ಕೇಂದ್ರ ಸರ್ಕಾರವು ಬಜೆಟ್ ಅಂಕಿಯನ್ನು ನಿರಂತರವಾಗಿ ಹೊರಹಾಕುವುದರಲ್ಲಿ ತಲ್ಲೀನವಾಗಿದೆ. ದಯವಿಟ್ಟು ಕುಂಭಮೇಳದಲ್ಲಿ ಮೃತರ ಸಂಖ್ಯೆಯನ್ನು ನೀಡಿ' ಎಂದು ಅಖಿಲೇಶ್ ಬಯಸಿದ್ದಾರೆ.
'ಕುಂಭಮೇಳ ಕಾಲ್ತುಳಿತದಲ್ಲಿ ಮೃತಪಟ್ಟವರು, ಗಾಯಾಳುಗಳು, ಚಿಕಿತ್ಸೆಯಲ್ಲಿರುವವರು ಸೇರಿದಂತೆ ಆಹಾರ, ನೀರು, ಸಾರಿಗೆ ಲಭ್ಯತೆಯ ನಿಖರ ಅಂಕಿಅಂಶಗಳನ್ನು ಸಂಸತ್ತಿಗೆ ತಿಳಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
'ಕಾಲ್ತುಳಿತ ನಡೆದ ಸ್ಥಳದಿಂದ ಮೃಹದೇಹಗಳನ್ನು ತೆರವುಗೊಳಿಸಲು ಸರ್ಕಾರವು ಜೆಸಿಬಿ ಮತ್ತು ಟ್ರ್ಯಾಕ್ಟರ್ಗಳನ್ನು ಬಳಸಿತ್ತು. ಇದು ಎಂತಹ ಸನಾತನ ಸಂಪ್ರದಾಯ' ಎಂದು ಅವರು ಪ್ರಶ್ನಿಸಿದ್ದಾರೆ.
ಜನವರಿ 29ರಂದು 'ಮೌನಿ ಅಮಾವಾಸ್ಯೆ'ಯಂದು ನಡೆದ ಅಮೃತ ಸ್ನಾನದ ವೇಳೆ ಉಂಟಾದ ಕಾಲ್ತುಳಿತದಲ್ಲಿ 30 ಭಕ್ತರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.