ADVERTISEMENT

ರೈತರ ಪ್ರತಿಭಟನೆ: ಖಾತೆಗಳ ಮರುಸ್ಥಾಪಿಸಿದ್ದಕ್ಕೆ ಟ್ವಿಟರ್‌ಗೆ ನೋಟಿಸ್

ಏಜೆನ್ಸೀಸ್
Published 3 ಫೆಬ್ರುವರಿ 2021, 10:33 IST
Last Updated 3 ಫೆಬ್ರುವರಿ 2021, 10:33 IST
ಸಾಂದರ್ಭಿಕ ಚಿತ್ರ – ಕೃಪೆ: ಎಎಫ್‌ಪಿ
ಸಾಂದರ್ಭಿಕ ಚಿತ್ರ – ಕೃಪೆ: ಎಎಫ್‌ಪಿ   

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ 'ಸುಳ್ಳು ಮತ್ತು ಪ್ರಚೋದನಕಾರಿ ವಿಚಾರವನ್ನು' ಹಂಚಿಕೊಂಡಿದ್ದ ಆರೋಪದ ಮೇಲೆ ಬ್ಲಾಕ್ ಮಾಡಲಾಗಿದ್ದ ಟ್ವಿಟರ್ ಖಾತೆಗಳನ್ನು ಮರುಸ್ಥಾಪಿಸಿರುವ ಬಗ್ಗೆ ಸರ್ಕಾರವು ಟ್ವಿಟರ್‌ಗೆ ನೋಟಿಸ್ ನೀಡಿದೆ.

ಸರ್ಕಾರದ ಆದೇಶದ ಹೊರತಾಗಿಯೂ ಟ್ವಿಟರ್ ಏಕಪಕ್ಷೀಯವಾಗಿ ಖಾತೆಗಳನ್ನು ಮರುಸ್ಥಾಪಿಸಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಸರ್ಕಾರದ ನಿರ್ದೇಶನವನ್ನು ಟ್ವಿಟರ್ ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದೂ ಸರ್ಕಾರ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರ ಮತ್ತು ರೈತರ ಪ್ರತಿಭಟನೆಗೆ ಸಂಬಂಧಿಸಿ 'ಸುಳ್ಳು ಮತ್ತು ಪ್ರಚೋದನಕಾರಿ ವಿಚಾರವನ್ನು' ಹಂಚಿಕೊಂಡಿದ್ದ ಆರೋಪದಲ್ಲಿ 250 ಖಾತೆಗಳನ್ನು ಟ್ವಿಟರ್ ಸೋಮವಾರ ಬ್ಲಾಕ್ ಮಾಡಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿ ಹತ್ತಾರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದಾದ ಬಳಿಕ ಸರ್ಕಾರದ ನಿರ್ದೇಶನದ ಮೇರೆಗೆ ಟ್ವಿಟರ್ ಖಾತೆಗಳು ಮತ್ತು ಟ್ವೀಟ್‌ಗಳನ್ನು ಬ್ಲಾಕ್ ಮಾಡಲಾಗಿತ್ತು. ಅವುಗಳನ್ನು ಈಗ ಟ್ವಿಟರ್ ಮರುಸ್ಥಾಪಿಸಿದೆ. ಅಲ್ಲದೆ ಈ ಟ್ವಿಟರ್ ಖಾತೆಗಳು ಮತ್ತು ಟ್ವೀಟ್‌ಗಳು 'ವಾಕ್ ಸ್ವಾತಂತ್ರ್ಯ' ಮತ್ತು 'ಸುದ್ದಿಗೆ ಅರ್ಹವಾಗಿವೆ' ಎಂದು ತೀರ್ಮಾನಿಸಿರುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.