ನವದೆಹಲಿ: 'ದೆಹಲಿ ಚಲೊ' ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರ ಜೊತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ವಿಚಾರವಾಗಿ ಸುದ್ದಿಸಂಸ್ಥೆ ಎಎನ್ಐ ಜೊತೆ ಶನಿವಾರ ಮಾತನಾಡಿರುವ ಅವರು, 'ಪ್ರತಿಭಟನಾನಿರತ ರೈತರ ಜೊತೆ ಮಾತುಕತೆ ನಡೆಸಲು ಭಾರತ ಸರ್ಕಾರ ಸಿದ್ಧವಿದೆ. ಈ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಕೃಷಿ ಸಚಿವರು ಡಿಸೆಂಬರ್ 3ರಂದು ರೈತರನ್ನು ಆಹ್ವಾನಿಸಿದ್ದಾರೆ. ರೈತರ ಪ್ರತಿಯೊಂದು ಸಮಸ್ಯೆ ಮತ್ತು ಬೇಡಿಕೆಯನ್ನು ಸರ್ಕಾರ ಆಲಿಸಲಿದೆ' ಎಂದು ತಿಳಿಸಿದ್ದಾರೆ.
ಅನೇಕ ಸ್ಥಳ ಹಾಗೂ ಹೆದ್ದಾರಿಗಳಲ್ಲಿ ತಮ್ಮ ಟ್ರ್ಯಾಕ್ಟರ್ಗಳೊಂದಿಗೆ ರೈತರು ಪ್ರತಿಭಟನೆಗೆ ಕುಳಿತಿದ್ದಾರೆ. ದೊಡ್ಡ ಮೈದಾನಕ್ಕೆ ಪ್ರತಿಭಟನಾನಿರತ ರೈತರನ್ನು ಸ್ಥಳಾಂತರಿಸಲು ದೆಹಲಿ ಪೊಲೀಸರು ಸಿದ್ಧರಾಗಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಪೊಲೀಸರು ಗೊತ್ತುಪಡಿಸಿರುವ ಸ್ಥಳಕ್ಕೆ ತೆರಳುವಂತೆ ರೈತರಿಗೆ ಮನವಿ ಮಾಡಿರುವ ಅವರು, 'ದಯವಿಟ್ಟು ನೀವು ಅಲ್ಲಿಗೆ ಹೋಗಿ. ಅಲ್ಲಿ ಕಾರ್ಯಕ್ರಮಗಳನ್ನು ನಡೆಸಲು ನಿಮಗೆ ಪೊಲೀಸ್ ಅನುಮತಿ ನೀಡಲಾಗುವುದು' ಎಂದು ಆಗ್ರಹಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ರೈತರು ‘ದೆಹಲಿ ಚಲೊ’ ಪ್ರತಿಭಟನಾ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.