ADVERTISEMENT

ಸಿವಿಸಿ ಆಯುಕ್ತರ ಹುದ್ದೆಗೆ ಅರ್ಜಿ: ಅಭ್ಯರ್ಥಿಗಳಿಗೆ 300 ಪದಮಿತಿಯ ಪ್ರಬಂಧ

ಪಿಟಿಐ
Published 10 ಮೇ 2021, 14:02 IST
Last Updated 10 ಮೇ 2021, 14:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಜಾಗೃತ ದಳದ (ಸಿವಿಸಿ) ಆಯುಕ್ತರ ಹುದ್ದೆಗೆ ಕೇಂದ್ರ ಸರ್ಕಾರವು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅಭ್ಯರ್ಥಿಗಳು ತಾವು ಆ ಹುದ್ದೆಗೆ ಎಷ್ಟು ಸಮರ್ಥರು ಎಂಬುದನ್ನು 300 ಪದಮಿತಿಯ ಪ್ರಬಂಧದಲ್ಲಿ ವಿವರಿಸಬೇಕಾಗಿದೆ.

ಪ್ರಸ್ತುತ ಕೇಂದ್ರ ಜಾಗೃತ ದಳದ ಮುಖ್ಯಸ್ಥರಾಗಿರುವ ಸಂಜಯ್ ಕೊಠಾರಿ ಅವರ ಅಧಿಕಾರಾವಧಿ ಮುಂದಿನ ತಿಂಗಳಿಗೆ ಮುಕ್ತಾಯವಾಗಲಿದೆ. ಹಾಗಾಗಿ, ಆಯುಕ್ತರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

‘ಈಗಿರುವ ಆಯುಕ್ತರ ಪೈಕಿ ಒಬ್ಬರ ಅವಧಿಯು ಇದೇ ಜೂನ್‌ಗೆ ಮುಕ್ತಾಯಗೊಳ್ಳಲಿದೆ. ಆ ಸ್ಥಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ’ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯವು ತಿಳಿಸಿದೆ.

ADVERTISEMENT

ಸಿವಿಸಿಯು ಇಬ್ಬರು ಆಯಕ್ತರನ್ನೊಳಗೊಂಡಿದೆ. ಪ್ರಸ್ತುತ ಸಂಜಯ್ ಕೊಠಾರಿ ಹಾಗೂ ಸುರೇಶ್ ಎನ್. ಪಟೇಲ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಅಭ್ಯರ್ಥಿಗಳು ತಾವು ಆಯುಕ್ತರ ಹುದ್ದೆಗೆ ಎಷ್ಟು ಸಮರ್ಥರು ಎಂಬುದನ್ನು 300 ಪದಮಿತಿಯ ಪ್ರಬಂಧದಲ್ಲಿ ವಿವರಿಸಬೇಕು. ವಿಮಾ, ಬ್ಯಾಂಕಿಂಗ್, ಕಾನೂನು ಜಾಗೃತಿ, ತನಿಖೆ, ಹಣಕಾಸು ವಿಷಯದಲ್ಲಿ ಅಭ್ಯರ್ಥಿಗಳು ಪರಿಣತಿ ಮತ್ತು ಅನುಭವ ಹೊಂದಿರಬೇಕು. ತಮ್ಮ ಕ್ಷೇತ್ರಗಳಲ್ಲಿ ಕನಿಷ್ಠ 25 ವರ್ಷ ಸೇವಾನುಭವ ಹೊಂದಿರಬೇಕು. ಆಸಕ್ತರು ಜೂನ್ 7ರೊಳಗೆ ಅರ್ಜಿ ಸಲ್ಲಿಸಬೇಕು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.