ADVERTISEMENT

'ಅದಾನಿ'ಗೆ ಆಹಾರ ಧಾನ್ಯಗಳ ಲಾಜಿಸ್ಟಿಕ್ಸ್ ಹಸ್ತಾಂತರ, ಕೇಂದ್ರ ಬಯಕೆ: ಕಾಂಗ್ರೆಸ್

ಪಿಟಿಐ
Published 9 ಮಾರ್ಚ್ 2023, 19:45 IST
Last Updated 9 ಮಾರ್ಚ್ 2023, 19:45 IST
   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಆಹಾರ ಧಾನ್ಯಗಳ ಲಾಜಿಸ್ಟಿಕ್ಸ್‌ ಅನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸಲು ಬಯಸುತ್ತಿದೆ’ ಎಂದು ಕಾಂಗ್ರೆಸ್‌ ಗುರುವಾರ ಆರೋಪಿಸಿದೆ.

‘ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರಿಂದಾಗಿ ಹಸ್ತಾಂತರದ ತಂತ್ರಗಾರಿಕೆಯು ತಾತ್ಕಾಲಿಕವಾಗಿ ವಿಫಲಗೊಂಡಿತ್ತು’ ಎಂದು ಹೇಳಿದೆ.

ಟ್ವೀಟ್‌ ಸರಣಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಮೂರು ಪ್ರಶ್ನೆಗಳನ್ನು ಇಟ್ಟಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, ‘ಆಹಾರ ಧಾನ್ಯಗಳ ಲಾಜಿಸ್ಟಿಕ್ಸ್‌ ಅನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸಲು ನಿಮ್ಮ ಸರ್ಕಾರ ಪಟ್ಟ ಪರಿಶ್ರಮವೆಷ್ಟು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಕಾರ್ಪೊರೇಟ್‌ ವಲಯದಲ್ಲಿರುವ ನಿಮ್ಮ (ಪ್ರಧಾನಿ) ಕೆಲ ಸ್ನೇಹಿತರಿಗೆ ಆಹಾರ ಧಾನ್ಯಗಳ ಲಾಜಿಸ್ಟಿಕ್ಸ್‌ ಹಸ್ತಾಂತರಿಸುವ ಉದ್ದೇಶದಿಂದಲೇ ಕೃಷಿ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿದ್ದಿರಿ. ಇದು ಇಡೀ ದೇಶಕ್ಕೆ ಗೊತ್ತು. ಕೃಷಿ ಮಸೂದೆ ಜಾರಿಯಿಂದ ಹೆಚ್ಚು ಲಾಭವಾಗುತ್ತಿದ್ದುದು ಅದಾನಿ ಅಗ್ರಿ ಲಾಜಿಸ್ಟಿಕ್ಸ್‌ಗೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.