ADVERTISEMENT

ಕ್ರೈಸ್ತ ಮಿಷನರಿ ಕೊಲೆ: 25 ವರ್ಷಗಳ ಜೈಲು ವಾಸದಿಂದ ಬಿಡುಗಡೆಯಾದ ಪ್ರಮುಖ ಅಪರಾಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2025, 11:13 IST
Last Updated 18 ಏಪ್ರಿಲ್ 2025, 11:13 IST
<div class="paragraphs"><p>ಕ್ರೈಸ್ತ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೇನ್ಸ್ ಮತ್ತು ಆತನ ಕುಟುಂಬ</p></div>

ಕ್ರೈಸ್ತ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೇನ್ಸ್ ಮತ್ತು ಆತನ ಕುಟುಂಬ

   

ಬೆಂಗಳೂರು: 1999 ರಲ್ಲಿ ಒಡಿಶಾದಲ್ಲಿ ಆಸ್ಟ್ರೇಲಿಯಾದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೇನ್ಸ್ ಮತ್ತು ಅವರ ಇಬ್ಬರು ಅಪ್ರಾಪ್ತ ವಯಸ್ಸಿನ ಪುತ್ರರನ್ನು ಹತ್ಯೆ ಮಾಡಿದ ಅಪರಾಧಿ ಮಹೇಂದ್ರ ಹೆಂಬ್ರಾಮ್ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

ಸುಪ್ರೀಂಕೋರ್ಟ್ ನಿರ್ದೇಶನದ ಮೇಲೆ ಒಡಿಶಾ ಸರ್ಕಾರ ಮಹೇಂದ್ರ ಹೆಂಬ್ರಾಮ್‌ನನ್ನು ಜೈಲಿನಿಂದ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ.

ADVERTISEMENT

ಇದೇ ಪ್ರಕರಣದಲ್ಲಿ ಪ್ರಮುಖ ಅಪರಾಧಿಯಾಗಿ ಮರಣದಂಡನೆ ಶಿಕ್ಷಗೆ ಗುರಿಯಾಗಿರುವ ರವೀಂದ್ರ ಪಾಲ್ ಅಲಿಯಾಸ್ ದಾರಾ ಸಿಂಗ್ ಸಹಚರ ಎಂದು ಮಹೇಂದ್ರ ಹೆಂಬ್ರಾಮ್‌ನನ್ನು ಗುರುತಿಸಲಾಗಿದೆ.

ಮಹೇಂದ್ರ ಹೆಂಬ್ರಾಮ್‌ನಿಗೂ ಮರಣದಂಡನೆ ನಿಗದಿಯಾಗಿತ್ತು. ಆದರೆ, 2005 ರಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಒಡಿಶಾ ಹೈಕೋರ್ಟ್ ಬದಲಾಯಿಸಿತ್ತು.

1999 ರಲ್ಲಿ ದೇಶ–ವಿದೇಶಗಳ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ 25 ವರ್ಷ ಜೈಲು ಶಿಕ್ಷೆ ಅನುಭವಿಸಿ ಇದೀಗ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿರುವ ಮಹೇಂದ್ರ ಹೆಂಬ್ರಾಮ್, ನಾನು ಹಿಂದೂಪರ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳುತ್ತಿದ್ದರಿಂದ ನಾನು ಈ ಪ್ರಕರಣದಲ್ಲಿ ಸಿಲುಕಿಕೊಳ್ಳುವಂತಾಯಿತು ಎಂದು ಹೇಳಿರುವುದಾಗಿ ವರದಿ ಹೇಳಿದೆ.

‘ಆಗಿದ್ದು ಆಗಿ ಹೋಯಿತು. ಜೈಲಿನಲ್ಲಿ ನನ್ನ ಜೀವನ ಬದಲಾಯಿತು. ಇನ್ನು ಮುಂದೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತೇನೆ’ ಎಂದು ಆತ ಹೇಳಿದ್ದಾನೆ.

ಏನಿದು ಪ್ರಕರಣ?

1999ರ ಜನವರಿ 22 ರಂದು ಒಡಿಶಾದ ಕೆಂದುಜ್‌ಹಾರ್ ಜಿಲ್ಲೆಯ ಮನೋಹರ್‌ಪುರ ಗ್ರಾಮದಲ್ಲಿ ಆಸ್ಟ್ರೇಲಿಯಾದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೇನ್ಸ್ ಮತ್ತು ಅವರ ಇಬ್ಬರು ಅಪ್ರಾಪ್ತ ವಯಸ್ಸಿನ ಪುತ್ರರನ್ನು ಉದ್ರಿಕ್ತರು ಹತ್ಯೆ ಮಾಡಿದ ಪ್ರಕರಣ ಇದಾಗಿದೆ.

ಅಂದು ಗ್ರಹಾಂ ಸ್ಟೇನ್ಸ್ ಮತ್ತು ಅವರ ಪುತ್ರರಾದ 11 ವರ್ಷದ ಫಿಲಿಪ್ ಮತ್ತು 8 ವರ್ಷದ ತಿಮೋತಿ ತಮ್ಮ ಕಾರಿನಲ್ಲಿ ಮನೋಹರ್‌ಪುರ ಗ್ರಾಮದ ಕಾಡಿನಲ್ಲಿ ಮಲಗಿದ್ದಾಗ ದಾರಾ ಸಿಂಗ್ ಮತ್ತು ಆತನ ಸಹಚರರು ಕಾರಿಗೆ ಬೆಂಕಿ ಹಚ್ಚಿದ್ದರು. ಕಾರಿನಿಂದ ಹೊರಬರಲಾಗದೇ ಗ್ರಹಾಂ ಸ್ಟೇನ್ಸ್ ಮತ್ತು ಆತನ ಮಕ್ಕಳು ಕಾರಿನಲ್ಲೇ ಸುಟ್ಟು ಕರಕಲಾಗಿದ್ದರು.

ಆ ಸಮಯದಲ್ಲಿ ಗ್ರಹಾಂ ಸ್ಟೇನ್ಸ್ ಅವರು ಒಡಿಶಾದ ಮಯೂರ್‌ಗಂಜ್, ಕೆಂದುಜ್‌ಹಾರ್ ಹಾಗೂ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಕ್ರೈಸ್ತ ಮಿಷನರಿ ಆಗಿ ಕೆಲಸ ಮಾಡುತ್ತಿದ್ದರು. ಅದರಲ್ಲೂ ಬುಡಕಟ್ಟು ಸಮುದಾಯಗಳಿಗೆ ಶಿಕ್ಷಣ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿತ್ತು. ಆದರೆ, ಭಜರಂಗದಳ ಸೇರಿದಂತೆ ಕೆಲ ದಿಂದೂಪರ ಸಂಘಟನೆಗಳು ಗ್ರಹಾಂ ಅವರು ಒಡಿಶಾದಲ್ಲಿ ಮತಾಂತರ ಮಾಡುತ್ತಾರೆ ಎಂದು ಅವರ ಮೇಲೆ ಕೋಪಗೊಂಡಿದ್ದರು.

ವಿಶೇಷ ಎಂದರೆ ಗ್ರಹಾಂ ಅವರ ಇಬ್ಬರೂ ಪುತ್ರರು ಊಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ರಜೆ ಕಳೆಯಲು ಅವರು ಒಡಿಶಾಕ್ಕೆ ಬಂದಿದ್ದರು. ಆ ವೇಳೆಯೇ ಅವರ ಹತ್ಯೆ ನಡೆದಿತ್ತು. ಗ್ರಹಾಂ ಅವರಿಗೆ ಪತ್ನಿ ಹಾಗೂ ಮಗಳಿದ್ದರು. ಆದರೆ, ಘಟನೆ ನಡೆದ ದಿನ ಅವರು ಗ್ರಹಾಂ ಜೊತೆ ಇರಲಿಲ್ಲ.

ಈ ಪ್ರಕರಣ ದೇಶವಲ್ಲದೇ ವಿದೇಶಗಳಲ್ಲೂ ಸದ್ದು ಮಾಡಿತ್ತು. ಈ ತ್ರಿವಳಿ ಹತ್ಯೆಯ ಪ್ರಮುಖ ಅಪರಾಧಿ ಸಿಂಗ್‌ಗೆ 2003ರಲ್ಲಿ ಸಿಬಿಐ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಇತರ 11 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಹೈಕೋರ್ಟ್ ಖುಲಾಸೆಗೊಳಿಸಿದೆ.

ಮಹೇಂದ್ರ ಹೆಂಬ್ರಾಮ್ ಬಿಡುಗಡೆಯಿಂದ ಸದ್ಯ ಈ ಪ್ರಕರಣದಲ್ಲಿ ದಾರಾ ಸಿಂಗ್ ಮಾತ್ರ ಜೈಲಿನಲ್ಲಿದ್ದಾನೆ. ಆತನ ಕ್ಷಮಾಧಾನದ ಅರ್ಜಿಯೂ ಒಡಿಶಾ ಸರ್ಕಾರದ ಬಳಿ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.