ADVERTISEMENT

ಆಮ್ ಆದ್ಮಿ ಪಕ್ಷ ಸೇರಿದ ಗುಜರಾತ್ ಕಾಂಗ್ರೆಸ್ ನಾಯಕ ಕೈಲಾಶ್ ಗಾಧ್ವಿ

ಪಿಟಿಐ
Published 24 ಏಪ್ರಿಲ್ 2022, 9:20 IST
Last Updated 24 ಏಪ್ರಿಲ್ 2022, 9:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್: ಗುಜರಾತ್ ಕಾಂಗ್ರೆಸ್ ನಾಯಕ ಕೈಲಾಶ್ ಗಾಧ್ವಿ ಭಾನುವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾದರು. ರಾಜ್ಯದಲ್ಲಿನ 'ಸೊಕ್ಕಿನ' ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೊಂದಿಗಿನ ಸಭೆಯ ಬಳಿಕ ಕಾಂಗ್ರೆಸ್ ಮಾಜಿ ವಕ್ತಾರರಾಗಿರುವ ಗಾಧ್ವಿ, 300 ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಎಎಪಿಗೆ ಇಂದು ಸೇರ್ಪಡೆಯಾದರು.

ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಜನರಿಗೆ ರಕ್ಷಣೆ ಮತ್ತು ಉದ್ಯೋಗ ನೀಡುವಲ್ಲಿ ಗುಜರಾತ್‌ನಲ್ಲಿನ ಬಿಜೆಪಿ ಸರ್ಕಾರ ವಿಫಲವಾಗಿದೆ. ತನ್ನ 27 ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ ಸರ್ಕಾರದ ಕಾರ್ಯವಿಧಾನವು ರಾಜ್ಯವನ್ನು 'ರಾಜಕೀಯದ ಪ್ರಯೋಗಾಲಯ'ವನ್ನಾಗಿ ಮಾಡಿಕೊಂಡಿದೆ ಎಂದು ದೂರಿದರು.

ADVERTISEMENT

ದೆಹಲಿಯ ಎಎಪಿ ಶಾಸಕ ಮತ್ತು ಪಕ್ಷದ ಗುಜರಾತ್ ಉಸ್ತುವಾರಿ ಗುಲಾಬ್ ಸಿಂಗ್ ರಜಪೂತ್ ಮಾತನಾಡಿ, 'ಇಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್‌‌ನ ನಾಯಕರು ಎಎಪಿ ಸೇರಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯ ಸಂಕೇತವಾಗಿದೆ. ಮುಂಬರುವ ವರ್ಷ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ದೊಡ್ಡ ದೊಡ್ಡ ನಾಯಕರು ಎಎಪಿಗೆ ಸೇರ್ಪಡೆಯಾಗಲಿದ್ದಾರೆ' ಎಂದರು.

ಇತ್ತೀಚೆಗಷ್ಟೇ ರಾಜ್ಯದಲ್ಲಿ ಪರೀಕ್ಷಾ ಪತ್ರಿಕೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿ ಭೂಪೇಂದ್ರ ಪಟೇಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಒಂದು ವೇಳೆ ಎಎಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದರೆ ಇಂತಹ ಘಟನೆಗಳನ್ನು ತಡೆಹಿಡಿಯುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.