ADVERTISEMENT

ಗುಜರಾತ್‌ನ ಮೊರ್ಬಿ ತೂಗು ಸೇತುವೆ ದುರಂತ: ಪುರಸಭೆಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 15:37 IST
Last Updated 19 ಜನವರಿ 2023, 15:37 IST
   

ಅಹಮದಾಬಾದ್‌: ತೂಗು ಸೇತುವೆ ದುರಂತಕ್ಕೆ ಸಂಬಂಧಿಸಿ ಮೊರ್ಬಿ ಪುರಸಭೆಗೆ ನೋಟಿಸ್‌ ಜಾರಿ ಮಾಡಿರುವ ಗುಜರಾತ್‌ ಸರ್ಕಾರ, ‘ಕರ್ತವ್ಯ ಲೋಪದ ಮೇಲೆ ಯಾಕೆ ಪುರಸಭೆಯನ್ನು ವಿಸರ್ಜಿಸಬಾರದು’ ಎಂದು ಕೇಳಿದೆ.

ಜನವರಿ 18ರಂದು ನೋಟಿಸ್‌ ಜಾರಿ ಮಾಡಿದ್ದು, ಇದಕ್ಕೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ಕಚೇರಿಯು ಅನುಮೋದನೆ ನೀಡಿದೆ.

ಅಕ್ಟೋಬರ್‌ 30ರಂದು ತೂಗು ಸೇತುವೆ ಕುಸಿದ ಪರಿಣಾಮ 147 ಮಂದಿ ಮೃತಪಟ್ಟಿದ್ದರು.

ADVERTISEMENT

ದುರಂತಕ್ಕೆ ಸಂಬಂಧಿಸಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಗುಜರಾತ್‌ ಹೈಕೋರ್ಟ್ ಕೈಗೆತ್ತಿಕೊಳ್ಳುವ ಒಂದು ದಿನದ ಮೊದಲು ಪುರಸಭೆಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿರುವುದಕ್ಕೆ ಗುಜರಾತ್‌ ಪುರಸಭೆ ಕಾಯ್ದೆ 263ರ ಅಡಿಯಲ್ಲಿ ಪುರಸಭೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೆಶನ ನೀಡಿತ್ತು.

ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಕುರಿತ ವಿಚಾರಣೆಯನ್ನು ಗುರುವಾರ ವಿಚಾರಣೆಗೆ ಕೈಗೆತ್ತಿಕೊಂಡ ವಿಭಾಗೀಯ ಪೀಠವು, ವಿಚಾರಣೆಯನ್ನು ಮುಂದೂಡಿದೆ.

ತನಿಖೆ ಕುರಿತು ಎಸ್‌ಐಟಿಯು ಈಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಬ್ರಿಟಿಷರ ಕಾಲದ ತೂಗು ಸೇತುವೆ ನಿರ್ವಹಣೆಯನ್ನು ಮೊರ್ಬಿ ಪುರಸಭೆಯ ಸಾಮಾನ್ಯ ಮಂಡಳಿಯ ಅನುಮೋದನೆ ಇಲ್ಲದೆ ಓರೆವಾ ಗ್ರೂಪ್‌ಗೆ ಹಸ್ತಾಂತರಿಸಲಾಗಿತ್ತು ಎಂದು ಎಸ್‌ಐಟಿ ನೀಡಿರುವ ವರದಿಯ ಕುರಿತು ಸರ್ಕಾರ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.