ಹಫೀಜ್ ಸಯೀದ್
ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಮೊಹಮ್ಮದ್ ಸಯೀದ್ ನೇತೃತ್ವದ ಭಯೋತ್ಪಾದನಾ ಜಾಲ ಈಗಲೂ ಭಾರತದ ವಿರುದ್ಧ ಸಕ್ರಿಯ ಕಾರ್ಯಾಚರಣೆ ನಡೆಸುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯಕ್ಕೆ ತಿಳಿಸಿದೆ.
ತಹವ್ವುರ್ ರಾಣಾನನ್ನು ವಶಕ್ಕೆ ಪಡೆಯಲು ನ್ಯಾಯಾಲಯದ ಮುಂದೆ ಮನವಿ ಇಟ್ಟ ತನಿಖಾ ಸಂಸ್ಥೆ, ಈ ಹೇಳಿಕೆ ನೀಡಿದೆ.
ರಾಣಾ ಈಗಾಗಲೇ ಬಹಳಷ್ಟು ವಿಚಾರಣೆ ಎದುರಿಸಿದ್ದರೂ, ಗಮನಾರ್ಹ ಪ್ರಮಾಣದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಎನ್ಐಎ ವಾದಿಸಿದೆ.
ಆರೋಪಿಯ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಅವಧಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪ್ರತಿವಾದಿಗಳು ವಾದಿಸಿದಂತೆ ದಿನಕ್ಕೆ 20 ಗಂಟೆ ಅಲ್ಲ ಎಂದು ಸಂಸ್ಥೆ ಒತ್ತಿ ಹೇಳಿದೆ.
ತನಿಖೆಯಲ್ಲಿ ರಾಣಾ ಅವರ ಸಹಕಾರದ ಕೊರತೆಯ ಬಗ್ಗೆಯೂ ಪ್ರಾಸಿಕ್ಯೂಷನ್ ಕಳವಳ ವ್ಯಕ್ತಪಡಿಸಿದೆ. ಭಾರತದ ಮೇಲೆ ದಾಳಿಗಳನ್ನು ನಡೆಸುವ ಮೊದಲು ಆರೋಪಿ ದೇಶಗಳ ನಡುವೆ ಸಂಚರಿಸಿದ್ದಾನೆ ಎಂಬ ಆರೋಪದ ವ್ಯಾಪಕ ವ್ಯಾಪ್ತಿ ಮತ್ತು ಜಾಗತಿಕ ಆಯಾಮದೊಂದಿಗೆ, ವಿಸ್ತೃತ ಪೊಲೀಸ್ ಕಸ್ಟಡಿಗೆ ಕೋರಿಕೆ ಸಮರ್ಥನೀಯ ಎಂದು ಸಂಸ್ಥೆ ವಾದಿಸಿದೆ.
ತನಿಖೆಯನ್ನು ಎನ್ಐಎ ಅತ್ಯಂತ ಶ್ರದ್ಧೆಯಿಂದ ನಡೆಸುತ್ತಿದೆ ಎಂದು ನ್ಯಾಯಾಲಯ ಗಮನಿಸಿದೆ.
ಅಲ್ಲದೆ, ಉಗ್ರ ತಹವ್ವುರ್ ರಾಣಾನ ಧ್ವನಿ ಮತ್ತು ಕೈಬರಹ ಮಾದರಿಗಳನ್ನು ಪಡೆಯಲು ವಿಶೇಷ ಎನ್ಐಎ ನ್ಯಾಯಾಲಯ ಅನುಮತಿ ನೀಡಿದೆ. ಪ್ರಸ್ತುತ ಎನ್ಐಎ ಕಸ್ಟಡಿಯಲ್ಲಿರುವ ರಾಣಾನನ್ನು ಇತ್ತೀಚೆಗೆ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.