ನವದೆಹಲಿ: ಉದ್ದೇಶಿತ ವೇತನ ರಹಿತ ಕಡ್ಡಾಯ ರಜೆ ಯೋಜನೆಯನ್ನು ಕೈಬಿಡುವಂತೆ ಏರ್ ಇಂಡಿಯಾ ಸಂಸ್ಥೆಯ ನೌಕರರ ಆರು ಒಕ್ಕೂಟಗಳು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿವೆ.
‘ಏರ್ ಇಂಡಿಯಾದ ಕೊರೊನಾ ವಾರಿಯರ್ಸ್ ಕಾರ್ಯವೈಖರಿಯನ್ನುದೊಡ್ಡ ಸಮಾರಂಭದಲ್ಲಿ ಕೊಂಡಾಡಿದ ಬಳಿಕ ಸಂಸ್ಥೆಯ ಆಡಳಿತ ಮಂಡಳಿಯ ಈ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಹೇಳಲು ನಮಗೆ ನಾಚಿಕೆಯಾಗುತ್ತಿದೆ. ಕಾನೂನು ಬಾಹಿರವಾದ ಈ ಯೋಜನೆಯನ್ನು ತಡೆಯುವಲ್ಲಿ ಮಧ್ಯಪ್ರವೇಶಿಸುವಂತೆ ಹಾಗೂ ನಿಮ್ಮೊಂದಿಗೆ ಸಭೆ ನಡೆಸಲು ಅವಕಾಶ ನೀಡುವಂತೆ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ’ ಎಂದು ಒಕ್ಕೂಟಗಳು ಮನವಿ ಪತ್ರದಲ್ಲಿ ಹೇಳಿವೆ.
ಸಂಸ್ಥೆ ಮುಂದಿಟ್ಟಿರುವ ಈ ಯೋಜನೆಯನ್ನು ವಿರೋಧಿಸುತ್ತಿರುವುದಾಗಿ ಎಂದು ಏರ್ ಕಾರ್ಪೊರೇಷನ್ ಎಂಪ್ಲಾಯೀಸ್ ಯೂನಿಯನ್, ಆಲ್ ಇಂಡಿಯಾ ಕ್ಯಾಬಿನ್ ಕ್ರ್ಯೂ ಅಸೋಸಿಯೇಷನ್, ಏರ್ ಇಂಡಿಯಾ ಎಂಪ್ಲಾಯಿ ಯೂನಿಯನ್, ಏರ್ ಇಂಡಿಯಾ ಏರ್ಕ್ರಾಫ್ಟ್ ಎಂಜಿನಿಯರ್ಸ್ ಅಸೋಸಿಯೇಷನ್ ಮತ್ತು ಇಂಡಿಯನ್ ಏರ್ಕ್ರಾಫ್ಟ್ ಟೆಕ್ನೀಶಿಯನ್ಸ್ ಅಸೋಸಿಯೇಷನ್ ತಿಳಿಸಿವೆ.
ವೇತನ ರಹಿತ ಕಡ್ಡಾಯ ರಜೆಯ ಮೇಲೆ ಕಳುಹಿಸಲು ಸಿಬ್ಬಂದಿಯನ್ನು ಆಯ್ಕೆ ಮಾಡುವಂತೆ ಏರ್ ಇಂಡಿಯಾ ಸಂಸ್ಥೆಯು ಜುಲೈ 14ರಂದು ತನ್ನ ವಿವಿಧ ಇಲಾಖೆಗಳಿಗೆ ಆದೇಶ ನೀಡಿತ್ತು. ಸಿಬ್ಬಂದಿಯೇ ಖುದ್ದಾಗಿ ಈ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು ಎಂದೂ ಹೇಳಿತ್ತು.
ಅಂಕಿ–ಅಂಶ
₹ 70 ಸಾವಿರ ಕೋಟಿ
ಏರ್ ಇಂಡಿಯಾದ ನಷ್ಟ
₹ 8,500 ಕೋಟಿ
2018–19ರಲ್ಲಿ ಸಂಸ್ಥೆಯ ನಷ್ಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.