ADVERTISEMENT

ಬಿಜೆಪಿ ಇವಿಎಂ ದುರ್ಬಳಕೆ ಮಾಡಿದ್ದೇ ಉಪಚುನಾಣೆ ಸೋಲಿಗೆ ಕಾರಣ: ಮಾಯಾವತಿ ಆರೋಪ

ಹಮೀರ್‌ಪುರ ವಿಧಾನಸಭಾ ಉಪಚುನಾವಣೆ

ಪಿಟಿಐ
Published 28 ಸೆಪ್ಟೆಂಬರ್ 2019, 11:18 IST
Last Updated 28 ಸೆಪ್ಟೆಂಬರ್ 2019, 11:18 IST
ಮಾಯಾವತಿ
ಮಾಯಾವತಿ   

ಲಖನೌ:ವಿದ್ಯುನ್ಮಾನ ಮತ ಯಂತ್ರವನ್ನು (ಇವಿಎಂ) ಬಿಜೆಪಿ ದುರುಪಯೋಗ ಪಡಿಸಿಕೊಂಡಿರುವುದರಿಂದ ಚುನಾವಣೆಯಲ್ಲಿ ಸೋಲಾಗಿದೆ. ಹೀಗಾಗಿ ಕಾರ್ಯಕರ್ತರು ನಿರಾಶರಾಗುವ ಅಗತ್ಯವಿಲ್ಲ’ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಶುಕ್ರವಾರ ಹೇಳಿದರು.

ಹಮೀರ್‌ಪುರ ವಿಧಾನಸಭಾ ಉಪಚುನಾಣೆಯಲ್ಲಿ ಬಿಎಸ್‌ಪಿ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಯುವರಾಜ್‌ ಸಿಂಗ್‌ ಅವರು ಸಮಾಜವಾದಿ ಪಕ್ಷದ ಮನೋಜ್‌ ಪ್ರಜಾಪತಿ ವಿರುದ್ಧ 17,846 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಶಾಸಕರಾಗಿದ್ದ ಅಶೋಕ್‌ಕುಮಾರ್‌ ಸಿಂಗ್‌ ಚಾಂದೆಲ್‌ಅವರಿಗೆ ಕೊಲೆ ಪ್ರಕರಣದಲ್ಲಿ ಶಿಕ್ಷೆಯಾಗಿ ಶಾಸಕತ್ವ ರದ್ದಾಗಿದ್ದರಿಂದ ಉಪಚುನಾವಣೆ ನಡೆದಿತ್ತು.

ADVERTISEMENT

ಸಿಂಗ್‌ 74,374 ಮತಗಳನ್ನು ಪಡೆದಿದ್ದು, ಪ್ರಜಾಪತಿ 56,528 ಮತಗಳನ್ನು ಗಳಿಸಿದ್ದಾರೆ. ಬಿಎಸ್‌ಪಿ ಅಭ್ಯರ್ಥಿ ನೌಶಾದ್‌ ಅಲಿ 28,790 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

‘ಇವಿಎಂಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಬಿಜೆಪಿಯ ಪ್ರವೃತ್ತಿ ಹಮೀರ್‌ಪುರ ಉಪಚುನಾವಣೆಯಲ್ಲಿಯೂ ಮುಂದುವರಿದಿದೆ. ಮಳೆಯಿಂದಾಗಿ ಅವರ ಮತದಾರರು ಹೊರಗೆ ಬಂದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.ಅವರ ಉದ್ದೇಶ ಸ್ಪಷ್ಟವಾಗಿದ್ದರೆ ಅವರು ಎಲ್ಲಾ 12 ಸ್ಥಾನಗಳಿಗೆ ಒಂದೇ ಬಾರಿಗೆ ಉಪಚುನಾವಣೆ ನಡೆಸುತ್ತಿದ್ದರು’ ಎಂದು ಮಾಯಾವತಿ ಟ್ವೀಟ್‌ ಮಾಡಿದ್ದಾರೆ.

ಪಕ್ಷದ ಸ್ಥೈರ್ಯವನ್ನು ಕುಗ್ಗಿಸುವ ಉದ್ದೇಶದಿಂದ ಪಿತೂರಿ ನಡೆಸಿಹನ್ನೊಂದು ಸ್ಥಾನಗಳಲ್ಲಿಯೂ ಬಿಎಸ್‌ಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿದೆ. ಈ ಯೋಜಿತ ಪಿತೂರಿಗೆ ಜನರ ಸಹಕಾರದೊಂದಿಗೆ ಬಿಎಸ್‌ಪಿಖಂಡಿತವಾಗಿಯೂ ಸೂಕ್ತ ಉತ್ತರ ನೀಡಲಿದೆ’ ಎಂದು ಹೇಳಿದರು.

‘ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಪಕ್ಷದ ಕಾರ್ಯಕರ್ತರು ಹೆಚ್ಚು ಶ್ರದ್ಧೆಯಿಂದ ಕೆಲಸ ಮಾಡಬೇಕಾಗಿದೆ. ಆಗ ಮಾತ್ರವೇ ಇಂತಹ ಪಿತೂರಿಗಳು ವಿಫಲವಾಗುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.